ಇಂಫಾಲ: ಮಣಿಪುರದಲ್ಲಿ 2023ರಲ್ಲಿ ಭುಗಿಲೆದ್ದಿದ್ದ ಭೀಕರ ಜನಾಂಗೀಯ ಸಂಘರ್ಷದ ವೇಳೆ ಅಪಹರಣಕ್ಕೊಳಗಾಗಿ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 20 ವರ್ಷದ ಕುಕಿ ಸಮುದಾಯದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಒಂದೆಡೆ ಘಟನೆ ನಡೆದು ಎರಡು ವರ್ಷಗಳ ನಂತರವೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ, ಮತ್ತೊಂದೆಡೆ ಮಗಳ ಸಾವಿನಿಂದ ಆಕೆಯ ಕುಟುಂಬ ಕಂಗಾಲಾಗಿದೆ. ಆಕೆಯ ಮೇಲೆ ನಡೆದ ದೈಹಿಕ ದೌರ್ಜನ್ಯ ಮತ್ತು ಅದರಿಂದ ಉಂಟಾದ ಮಾನಸಿಕ ಆಘಾತವೇ ಆಕೆಯ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
2023ರ ಮೇ ತಿಂಗಳಲ್ಲಿ ಮಣಿಪುರದ ಇಂಫಾಲದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ಆರಂಭವಾದ ದಿನಗಳಲ್ಲಿ ಈ ಯುವತಿಯನ್ನು ಗುಂಪೊಂದು ಅಪಹರಿಸಿತ್ತು. ಆ ಸಂದರ್ಭದಲ್ಲಿ ತನ್ನ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರದ ಕುರಿತು ಆಕೆ ಜುಲೈ 2023ರಲ್ಲಿ ಮಾಧ್ಯಮಗಳ ಮುಂದೆ ವಿವರಿಸಿದ್ದಳು. ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ತನ್ನನ್ನು ವಾಹನದಲ್ಲಿ ಅಪಹರಿಸಿ ಬೆಟ್ಟದ ಪ್ರದೇಶಕ್ಕೆ ಕರೆದೊಯ್ದು, ಮೂವರು ವ್ಯಕ್ತಿಗಳು ಸರದಿಯಂತೆ ಅತ್ಯಾಚಾರ ಎಸಗಿದ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ಮಾರಣಾಂತಿಕ ಗಾಯಗಳೊಂದಿಗೆ ಹೇಗೋ ತಪ್ಪಿಸಿಕೊಂಡು ಬಂದಿದ್ದ ಆಕೆ, ರಾಜ್ಯದಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯ ಕಾರಣದಿಂದ ಘಟನೆ ನಡೆದ ಎರಡು ತಿಂಗಳ ನಂತರವಷ್ಟೇ ಪೊಲೀಸ್ ದೂರು ದಾಖಲಿಸಲು ಸಾಧ್ಯವಾಗಿತ್ತು.
ಇಂಡಿಜಿನಸ್ ಟ್ರೈಬಲ್ ಲೀಡರ್ಸ್ ಫೋರಂ (ITLF) ನೀಡಿರುವ ಮಾಹಿತಿಯ ಪ್ರಕಾರ, ಅತ್ಯಾಚಾರದ ನಂತರ ಆಕೆಯನ್ನು ಬಿಷ್ಣುಪುರ ಎಂಬಲ್ಲಿ ಸಾಯಲು ಬಿಟ್ಟು ಹೋಗಲಾಗಿತ್ತು. ಪವಾಡಸದೃಶವಾಗಿ ಬದುಕುಳಿದರೂ, ಆಕೆ ತೀವ್ರವಾದ ಗರ್ಭಾಶಯದ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಗುವಾಹಟಿಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದ ಹೊರತಾಗಿಯೂ, ಜನವರಿ 10ರಂದು ಆಕೆ ಮೃತಪಟ್ಟಿದ್ದಾಳೆ. ಘಟನೆಯ ಮೊದಲು ಅತ್ಯಂತ ಉತ್ಸಾಹಿಯಾಗಿದ್ದ ತನ್ನ ಮಗಳು, ಈ ಘೋರ ಕೃತ್ಯದ ನಂತರ ತನ್ನ ನಗು ಮತ್ತು ಬದುಕುವ ಆಸೆಯನ್ನೇ ಕಳೆದುಕೊಂಡಳು ಎಂದು ಆಕೆಯ ತಾಯಿ ನೋವಿನಿಂದ ಸ್ಮರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅರಂಬಾಯಿ ತೆಂಗೋಲ್’ ಎಂಬ ಸಂಘಟನೆಯ ಕಾರ್ಯಕರ್ತರ ಮೇಲೆ ಆರೋಪ ಕೇಳಿಬಂದಿತ್ತು. ಈ ಭೀಕರ ಘಟನೆಯು ಮಣಿಪುರದ ಸಂಘರ್ಷದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಸರಣಿಗೆ ಮತ್ತೊಂದು ಕಪ್ಪು ಚುಕ್ಕೆಯಾಗಿದೆ. ಮಣಿಪುರದಲ್ಲಿ ನಡೆದ ಈ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಸುಮಾರು 50,000 ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ಬಿಎಂಸಿ ಪಾಲಿಕೆ ಕೈತಪ್ಪಿದ ಬೆನ್ನಲ್ಲೇ ಠಾಕ್ರೆ ಸಹೋದರರಿಂದ ಮರಾಠಿ ಅಸ್ಮಿತೆಯ ಜಪ



















