ಬೆಂಗಳೂರು : ಸ್ಯಾಂಡಲ್ವುಡ್ ಕ್ವೀನ್, ನಟಿ ರಮ್ಯಾ ಬೀದಿನಾಯಿಗಳ ಪರ ಮಾತನಾಡುವ ಭರದಲ್ಲಿ ಪುರುಷ ಸಮೂಹವನ್ನು ಅವಮಾನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೀದಿ ನಾಯಿ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಅವರು, ಪುರುಷರು ಯಾವಾಗ ಅತ್ಯಾಚಾರ ಎಸಗುತ್ತಾರೆ/ಕೊಲೆ ಮಾಡುತ್ತಾರೆ ಎನ್ನುವುದನ್ನು ಅವರ ಮನಸ್ಥಿತಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೆ? ಎಂದು ಪ್ರಶ್ನಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ರಮ್ಯಾ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾಯಿಗಳ ಹಾವಳಿ ಬಗ್ಗೆ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದನ್ನು ಉಲ್ಲೇಖಿಸಿ ರಮ್ಯಾ ಈ ಹೇಳಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಮಂಗಳವಾರ (ಜನವರಿ 6) ಬೀದಿ ನಾಯಿಗಳ ಪ್ರಕರಣದಲ್ಲಿ ಹಲವು ಮಧ್ಯಂತರ ಅರ್ಜಿಗಳನ್ನು ಆಲಿಸಿ, ಹೆದ್ದಾರಿಗಳಲ್ಲಿ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು, ಬೀದಿ ನಾಯಿಗಳ ಮನಸ್ಸನ್ನು ಯಾರಿಗೂ ಓದಲು ಸಾಧ್ಯವಿಲ್ಲ. ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು.
“ರಸ್ತೆಗಳು ನಾಯಿಗಳಿಲ್ಲದೆ ಸ್ವಚ್ಛವಾಗಿರಬೇಕು. ಅವು ಕಚ್ಚದೇ ಇರಬಹುದು, ಆದರೆ ಅವು ಅಪಘಾತಗಳಿಗೆ ಕಾರಣವಾಗುತ್ತವೆ. ಬೀದಿಗಳು, ಶಾಲೆಗಳು ಮತ್ತು ಸಾಂಸ್ಥಿಕ ಪ್ರದೇಶಗಳಲ್ಲಿ ನಮಗೆ ನಾಯಿಗಳು ಏಕೆ ಬೇಕು?” ಎಂದು ಪೀಠ ಪ್ರಶ್ನಿಸಿತು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಟಿ ರಮ್ಯಾ ಈಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸದ್ಯ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ರಮ್ಯಾ ಪುರುಷರನ್ನು ಬೀದಿ ನಾಯಿಗೆ ಹೊಲೀಸಿದ್ದಾರೆ ಎಂದು ಒಂದಷ್ಟು ಮಂದಿ ಆರೋಪಿಸಿದ್ದಾರೆ. ರಮ್ಯಾ ಪ್ರಕಾರ ಯಾವ ಪುರುಷನೂ ಉತ್ತಮ ಗುಣ ಹೊಂದಿಲ್ಲವೆ? ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ತನ್ನ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ದೂರು ದಾಖಲಿಸುವ ಮೂಲಕ ಸದ್ದು ಮಾಡಿದ್ದರು. ತನ್ನಂತೆ ಬೇರೆ ಯಾವ ನಟಿಗೂ ಹೀಗೆ ಆಗಬಾರದೆಂದು ಈ ಕ್ರಮ ಕೈಗೊಂಡಿದ್ದಾಗಿ ಅವರು ತಿಳಿಸಿದ್ದರು. ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ : ಟಿ20 ವಿಶ್ವಕಪ್ಗೆ ಕಿವೀಸ್ ರಹಸ್ಯ ಅಸ್ತ್ರ | ಬಲಗೈ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಈಗ ಎಡಗೈ ಆಟಗಾರ!



















