ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರಿನಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಸುಮಾರು 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಕ್ರಿಸ್ಮಸ್ ರಜೆಗೆಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಟ್ರಿಪ್ ಹೋಗುತ್ತಿದ್ದವರು ಸೇರಿದ್ದು, ಅವರ ಪ್ರವಾಸದ ಪ್ಲಾನ್ ದುರಂತ ಅಂತ್ಯ ಕಂಡಿದೆ.
ಈ ತಂಡದಲ್ಲಿ ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಎಚ್ವಿ, ದಿಲೀಪ್, ಪ್ರೀತಿಸ್ವರನ್, ಬಿಂದು ಮತ್ತು ಕವಿತ ಕೆ ಇದ್ದರು. ಕ್ರಿಸ್ಮಸ್ ರಜೆಯಲ್ಲಿ ಗೋಕರ್ಣಕ್ಕೆ ಟ್ರಿಪ್ ಹೋಗುತ್ತಿದ್ದ ಈ ಗೆಳೆಯರು ಬಸ್ನಲ್ಲಿ ಸಂತೋಷದಿಂದ ಪ್ರಯಾಣಿಸುತ್ತಿದ್ದರು. ಆದರೆ, ಬೆಳಗ್ಗೆ ಸುಮಾರು 3 ಗಂಟೆಗೆ ಗೊರ್ಲತ್ತು ಕ್ರಾಸ್ ಬಳಿ ನಡೆದ ಅಪಘಾತ ಅವರ ಕನಸನ್ನು ಛಿದ್ರಗೊಳಿಸಿದೆ. ತಂಡದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಳಿದವರಲ್ಲಿ 24 ವರ್ಷದ ಮಂಜುನಾಥ್ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮಂಜುನಾಥ್ ಅವರು ಮಾವಳ್ಳಿಯಲ್ಲಿ ಸಣ್ಣ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದರು. ಗೆಳೆಯರ ಜೊತೆ ಗೋಕರ್ಣಕ್ಕೆ ಹೋಗುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಅವರ ದೇಹದ 23% ಸುಟ್ಟು ಹೋಗಿದೆ. ವಿಶೇಷವಾಗಿ ಹೊಟ್ಟೆಯಿಂದ ಕೆಳಭಾಗಕ್ಕೆ ತೀವ್ರ ಸುಟ್ಟ ಗಾಯಗಳಾಗಿವೆ. ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ ವಾರ್ಡ್ನಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಪಘಾತದಿಂದ ಪಾರಾದ ದಿಲೀಪ್ ಈ ದುರಂತದ ಬಗ್ಗೆ ಮಾತನಾಡಿದ್ದು, ದುರಂತದ ಬಗ್ಗೆ ಮಾತನಾಡಿದ್ದಾರೆ. ರಾತ್ರಿ 12 ಗಂಟೆಗೆ ವಾಶ್ರೂಂ ಬ್ರೇಕ್ ಕೊಟ್ಟಿದ್ದರು. ಅಲ್ಲಿವರೆಗೆ ಬಸ್ ನಿಧಾನವಾಗಿ ಹೋಗುತ್ತಿತ್ತು. ಆದರೆ ಬ್ರೇಕ್ ನಂತರ ಚಾಲಕ ರ್ಯಾಶ್ ಡ್ರೈವಿಂಗ್ ಮಾಡಿದರು. ನೋಡ್ತಾ ನೋಡ್ತಾ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹತ್ತಿಕೊಂಡಿತು” ಎಂದು ಶಾಕ್ನಲ್ಲಿ ವಿವರಿಸಿದ್ದಾರೆ. ಮಂಜುನಾಥ್ ಅವರು ದಿಲೀಪ್ ಜೊತೆಯೇ ಸೀಟ್ನಲ್ಲಿ ಕುಳಿತಿದ್ದರು. ಬೆಂಕಿ ಹೊತ್ತಿಕೊಳ್ತಿದ್ದಂತೆ ಇಬ್ಬರೂ ಹೊರಬಂದಿದ್ದು, ಮಂಜುನಾಥ್ ದೇಹ ಅರ್ಧ ಸುಟ್ಟು ಹೋಗಿತ್ತು.
ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಚಿತ್ರದುರ್ಗ ಮತ್ತು ಬೆಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಅತ್ತ ಕೇಂದ್ರ ಸರ್ಕಾರದಿಂದ ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿ ಪರಿಹಾರ
ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ಹಿರಿಯೂರು ಬಸ್ ದುರಂತ | ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರಿಂದ ಸಂತಾಪ



















