ಬೆಂಗಳೂರು | ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ತಲೆ ಮರೆಸಿಕೊಂಡಿರುವ ಬೈರತಿ ಬಸವರಾಜ್ಗೆ ಮತ್ತೆ ಸಂಕಷ್ಟ ಹೆಚ್ಚಾಗಿದೆ.
ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್, ಪ್ರಕರಣದಲ್ಲಿ ಎ5 ಭೈರತಿ ಬಸವರಾಜ್ ಪಾತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹೈಕೋರ್ಟ್ಗೆ ನೀಡಿದ್ದ ಮಾಹಿತಿಯನ್ನು ಸಲ್ಲಿಸುವಂತೆ ಎಸ್ಪಿಪಿಗೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಸೂಚಿಸಿದ್ದಾರೆ.
ಈ ಬಗ್ಗೆ ಎಸ್ಪಿಪಿ ಅಶೋಕ್ ನಾಯ್ಕ್ ಮಾತನಾಡಿ, ಹತ್ಯೆ ಪ್ರಕರಣದಲ್ಲಿ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಇಂದು ಮುಂಜಾನೆಯಿಂದ ಸುದೀರ್ಘ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಲಾಗಿತ್ತು. ಈಗ ಆದೇಶ ಪ್ರಕಟವಾಗಿದ್ದು, ಅರ್ಜಿ ವಜಾ ಆಗಿದೆ. ಸಾಕ್ಷ್ಯಾಧಾರಗಳು, ವಿದ್ಯಮಾನಗಳನ್ನ ಕೋರ್ಟ್ ಗಮನಿಸಿದೆ. ನಮ್ಮ ವಾದ ಆಲಿಸಿದ ಕೋರ್ಟ್ ಅವರ ಜಾಮೀನು ಅರ್ಜಿ ವಜಾ ಮಾಡಿದೆ ಎಂದು ಸಿಐಡಿ ಎಸ್ಪಿಪಿ ಆಶೋಕ್ ನಾಯ್ಕ್ ಹೇಳಿದ್ದಾರೆ.
ಸಿಐಡಿ ಪರ ವಕೀಲ ಅಶೋಕ್ ನಾಯ್ಕ್ ವಾದವೇನು?
ಹೈಕೋರ್ಟ್ ಆದೇಶದ ಮಾಹಿತಿ ತಿಳಿದು ಕಲಾಪಕ್ಕೆ ಹೋಗಿದ್ದವರು ಡಿ.18 ರಿಂದ ಎಸ್ಕೇಪ್ ಆಗಿದ್ದಾರೆ. ಸದನದಲ್ಲಿ ಇರಬೇಕಾದ ಶಾಸಕರು ಎಲ್ಲಿ ಹೋದ್ರು? ಕೊಲೆ ಕೇಸ್ನಲ್ಲಿ ಆರೋಪಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ. ಎ1 ರಿಂದ ಎ5 ತನಕ ಇರುವ ಆರೋಪಿಗಳು ಒಳಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ. ಎ1 ಜಗದೀಶ್ ಎ5 ಬೈರತಿ ಬಸವರಾಜ್ ಸಂಪರ್ಕದಲ್ಲಿದ್ದಾರೆ. ಎ1, ಎ5 ಕುಂಭಮೇಳಕ್ಕೆ ಹೋಗಿದ್ದಾರೆ ಎಂದು ದಾಖಲೆ ಸಲ್ಲಿಕೆಯಾಗಿದೆ. ಬೈರತಿಗೂ ಕೊಲೆಯಾದವನಿಗೆ ದೇವಸ್ಥಾನದ ಜಾಗದ ವಿಚಾರವಾಗಿ ಗಲಾಟೆ ಆಗಿದೆ. ಬೈರತಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಆದರೆ, ಕಣ್ಣಿಗೆ ಕಾಣಲ್ಲ. ಅವಲಹಳ್ಳಿ ಜಾಗದ ವಿಚಾರವಾಗಿ ಎ5 ಕೊಲೆಯಾದ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದ. ಎ20, ಎ5 ಆಪ್ತ ಸಹಾಯಕರೇ ಜಾಗದ ಗಲಾಟೆ ವಿಚಾರಕ್ಕೆ ಹೋಗ್ತಾರೆ. ಎ1 ಬೈರತಿಗೆ ವಿಷಯ ತಿಳಿಸಿ ವಿದೇಶಕ್ಕೆ ಹೋಗಿದ್ದಾರೆ. ಇದು ಟವರ್ ಲೊಕೇಷನ್ನಲ್ಲಿ ತಿಳಿದಿದೆ. ಎ1 ವಿದೇಶಕ್ಕೆ ಎಸ್ಕೇಪ್ ಆಗಲು ಎ5 ಸಹಾಯ ಮಾಡಿದ್ದಾರೆ. ಎ5, ಇತರೆ ಆರೋಪಿಗಳಿಗೆ ಹೋಗಿ ಸರೆಂಡರ್ ಆಗಿ ಅಂತಾರೆ ಕಾಲ್ ರೆಕಾರ್ಡ್ಸ್ ಇದೆ. ನಾವು ತಾಂತ್ರಿಕ ಸಾಕ್ಷ್ಯಗಳಾದ ಸಿಡಿಆರ್, ಟವರ್ ಲೊಕೇಷನ್ ನೀಡುತ್ತೇವೆ ಎಂದು ವಕೀಲ ಅಶೋಕ್ ನಾಯ್ಕ್ ಟವರ್ ಲೊಕೇಷನ್, ಸಿಡಿಆರ್ ದಾಖಲೆ ಸಲ್ಲಿಕೆ ಮಾಡಿದ್ದಾರೆ.
ಬೈರತಿ ಪರ ವಕೀಲರ ವಾದವೇನು?
ಪ್ರಕರಣ ದಾಖಲಾಗಿ ಐದು ತಿಂಗಳು 10 ದಿನ ಆಗಿದೆ. 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಏಳರಿಂದ ಎಂಟು ಆರೋಪಿಗಳು ಕೊಲೆ ಸಂದರ್ಭದಲ್ಲಿ ಅಪರಿಚಿತರರು ಇದ್ದಾರೆ. ಆದರೆ, ಬೈರತಿ ಬಸವರಾಜ್ರನ್ನ ಎ-5 ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಎಫ್ಐಆರ್ನಲ್ಲಿ ಹೆಸರು ಸೇರಿಸಿದ್ದಾರೆ. ಸಿಐಡಿಗೆ ಪ್ರಕರಣ ವರ್ಗಾವಣೆ ಆದ ನಂತರ ನಿನ್ನೆಯವರೆಗೂ ಸಿಐಡಿ ನೋಟಿಸ್ ನೀಡಿಲ್ಲ, ಸಮನ್ಸ್ ಕೊಟ್ಟಿಲ್ಲ. ಹೇಗೆ ವಿಚಾರಣೆಗೆ ಹಾಜರಾಗುವುದು? ಎಫ್ಐಆರ್ನಲ್ಲಿ ಹೆಸರು ಸೇರಿಸುವುದು ಬಿಟ್ಟು ಬೇರೆ ಏನ್ ಮಾಡಿದ್ದಾರೆ? ಐದು ತಿಂಗಳು ಸುಮ್ಮನಿದ್ದು ಈಗ ಕಸ್ಟೋಡಿಯಲ್ ಇಟ್ರಾಗೇಷನ್ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಎಫ್ಐಆರ್ ದಾಖಲು ಮಾಡಿದ ನಂತರ ಕೋಕಾ ಕಾಯ್ದೆ ಜಾರಿ ಮಾಡುತ್ತಾರೆ. ಬೈರತಿ ಬಸವರಾಜ್ ಯಾವುದೇ ತನಿಖೆಗೂ ಸಿದ್ಧ, ಯಾವತ್ತು ಕರೆದರೂ ತನಿಖೆಗೆ ಬರುತ್ತಾರೆ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಗಾಂಧಿಯನ್ನು ಸಾಕಷ್ಟು ಬಾರಿ ಕೊಲೆ ಮಾಡಿದೆ | ಬೊಮ್ಮಾಯಿ



















