ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್ ಖ್ಯಾತಿಯ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಸಂಸ್ಥೆಯಲ್ಲಿ (KSDL) ಗಂಧದೆಣ್ಣೆ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಆರೋಪ ಕೇಳಿಬಂದಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಟಿ ಮಂಜು, ತೈಲ ಖದೀರಿ ಟೆಂಡರ್ನಲ್ಲಿ ಸುಮಾರು 1,000 ಕೋಟಿ ಅವ್ಯವಹಾರ ನಡೆದಿದೆ. ಈ ಹಗರಣದಲ್ಲಿ ಅಧಿಕಾರಿಗಳು, ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಕಿಕ್ಬ್ಯಾಕ್ ಹೋಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಸಾಬೂನು ಮತ್ತು ಮಾರ್ಜಕ ತಯಾರಿಕೆಯಲ್ಲಿ ಬಳಸುವ ತೈಲ ಸರಬರಾಜಿಗೆ ಬೇರೆ ಕಂಪನಿಗೆ ಅವಕಾಶ ನೀಡದೇ, ಒಂದೇ ಕಂಪನಿಗೆ ಟೆಂಡರ್ಗೆ ಅವಕಾಶ ಕೊಡಲಾಗಿದೆ. 2019ರಲ್ಲಿಯೇ ಬ್ಲ್ಯಾಕ್ಲಿಸ್ಟ್ನಲ್ಲಿರುವ ಕಂಪನಿಗೆ ಟೆಂಡರ್ ಕೊಡಲಾಗಿದೆ. 2022, 2023ರಲ್ಲಿ ಒಂದು ಕೆ.ಜಿಗೆ ಸ್ಯಾಂಡಲ್ ಆಯಿಲ್ಗೆ 2,24,655 ರೂಪಾಯಿ ಇತ್ತು. ನಾನು ಪತ್ರ ಬರೆದ ನಂತರ 2025ರಲ್ಲಿ ಸ್ಯಾಂಡಲ್ ಆಯಿಲ್ 93,116 ರೂ ಬೆಲೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಅಂದರೆ ಹಿಂದಿನ ಬೆಲೆಗಿಂತ ಕೆಜಿ ಗೆ 1.2 ಲಕ್ಷ ಕಡಿಮೆ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ಈವರೆಗೆ 11,000 ಕೆ.ಜಿ ಸ್ಯಾಂಡಲ್ ವುಡ್ ತೈಲವನ್ನ 1.2 ಲಕ್ಷಕ್ಕೂ ಅಧಿಕ ದರ ನೀಡಿ ಖರೀದಿ ಮಾಡಿದ್ದಾರೆ. ಇದರಿಂದ ಕಂಪನಿಗೆ ಸುಮಾರು 132 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. 1000 ಕೋಟಿಗೂ ಹೆಚ್ಚು ಅವ್ಯವಹಾರ ಆಗಿದೆ. ಒಟ್ಟು 1,700 ಕೋಟಿ ವ್ಯವಹಾರದಲ್ಲಿ 1 ಸಾವಿರ ಕೋಟಿ ಅವ್ಯವಹಾರ ಆಗಿದೆ. ಹೀಗಾಗಿ ಎಸ್ ಐಟಿ ತನಿಖೆ ಆಗಬೇಕು ಎಂದು MLA ಹೆಚ್.ಟಿ ಮಂಜು ಒತ್ತಾಯಿಸಿದ್ದಾರೆ.
ಹೆಚ್ ಟಿ ಮಂಜು ಆರೋಪಗಳೇನು?
* ಕ್ರಿಮಿನಲ್ ಹಿನ್ನೆಲೆಯುಳ್ಳ ಕರ್ನಾಟಕ ಕೆಮಿಕಲ್ ಇಂಡಸ್ಟ್ರೀಸ್, ಕರ್ನಾಟಕ ಅರೋಮಾಸ್ ಕಂಪನಿಗಳಿಗೆ ಸರಬರಾಜು ಆದೇಶ.
* ಟೆಂಡರ್ ಮೊತ್ತ 50 ಕೋಟಿ ಮೀರಿದರೂ ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅನುಮತಿ ಪಡೆದಿಲ್ಲ.
* ಟೆಂಡರ್ ಅಂದಾಜು ಮೊತ್ತಕ್ಕಿಂತ ಕಡಿಮೆ ವಾರ್ಷಿಕ ವಹಿವಾಟು ಇರುವ ಕಂಪನಿಗೆ ಟೆಂಡರ್.
* ಶೇ 5 ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ಅಂಗೀಕಾರ ಮಾಡಿ ಸಂಸ್ಥೆಗೆ 57 ಕೋಟಿ ನಷ್ಟ.
* ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ತೈಲ ಖರೀದಿ ಮಾಡಲಾಗಿದೆ.
* ಒಟ್ಟು 1,700 ಕೋಟಿ ರೂ ವ್ಯವಹಾರದಲ್ಲಿ 1,000 ಕೋಟಿಗೂ ಹೆಚ್ಚು ಅವ್ಯವಹಾರ ಆರೋಪ.
* ಕೆಎಸ್ಡಿಎಲ್ ಮೇಲಧಿಕಾರಿಗಳು ಶಾಮೀಲು. ಸರ್ಕಾರಕ್ಕೆ ಕಿಕ್ಬ್ಯಾಕ್.
ಇದನ್ನೂ ಓದಿ : ಇಂಡಿಗೋ ವಿಮಾನ ಹಾರಾಟ ರದ್ದು | ಕೈಯಲ್ಲಿ ತಂದೆಯ ಅಸ್ಥಿ ಹಿಡಿದು ಬೆಂಗಳೂರು ಏರ್ಪೋರ್ಟ್ನಲ್ಲಿ ಮಗಳ ಪರದಾಟ



















