ಚೆನ್ನೈ : ಭಾರತದ ಅತ್ಯಂತ ಹಳೆಯ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಎವಿಎಂ ಸ್ಟುಡಿಯೋಸ್ನ ಪ್ರಮುಖರಾದ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ನಿರ್ಮಾಪಕ ಎವಿಎಂ ಸರವಣನ್ (86) ಇಹಲೋಕ ತ್ಯಜಿಸಿದ್ದಾರೆ.
ತಮಿಳು, ತೆಲುಗು ಹಾಗೂ ಕನ್ನಡ ಚಿತ್ರರಂಗಗಳಿಗಾಗಿಯೇ ಅನೇಕ ಅಮರ ಚಿತ್ರಗಳನ್ನು ನೀಡಿದ ಅವರು, ದಕ್ಷಿಣ ಭಾರತೀಯ ಚಲನಚಿತ್ರ ಉದ್ಯಮದಲ್ಲಿ ಅಚ್ಚಳಿಯದೇ ಉಳಿಯುವ ಗುರುತನ್ನಿಟ್ಟು ತೆರಳಿದ್ದಾರೆ.
ಎವಿಎಂ ಸರವಣನ್ ಅವರು, ಎವಿಎಂ ಸಂಸ್ಥಾಪಕ ಎವಿ ಮೇಯಪ್ಪನ್ ಅವರ ಪುತ್ರರಾಗಿದ್ದು, ತಮ್ಮ ತಂದೆಯ ಪರಂಪರೆಯನ್ನು ಮುಂದುವರಿಸಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಎವಿಎಂ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಕರ್ನಾಟಕದಲ್ಲಿ ನಟಸಾರ್ವಭೌಮ ಡಾ. ರಾಜ್ಕುಮಾರ್ ನಟಿಸಿದ ಮೊದಲ ಪ್ರಮುಖ ಚಿತ್ರ ‘ಬೇಡರ ಕಣ್ಣಪ್ಪ’ ಕೂಡ ಇದೇ ಸಂಸ್ಥೆಯ ನಿರ್ಮಾಣವಾಗಿತ್ತು.
ಅಮರವಾಗಿರುವ ಸರವಣನ್ ನಿರ್ಮಾಣದ ಚಿತ್ರಗಳು :
ಎವಿಎಂ ಸರವಣನ್ ಅವರು ಅನೇಕ ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ, ಶಿವಾಜಿ (ರಜನೀಕಾಂತ್), ಅಯನ್ (ಸೂರ್ಯ), ಮಿನ್ಸರ ಕನವು (ಪ್ರಭುದೇವ–ಕಾಜೋಲ್), ವೇಟ್ಟೈಕಾರನ್ (ವಿಜಯ್), ತಿರುಪತಿ (ಅಜಿತ್), ಜೆಮಿನಿ(ವಿಕ್ರಂ), ಲೀಡರ್ (ರಾಣಾ ದಗ್ಗುಬಾಟಿ), ಶಕ್ತಿವೆಲ್ IPS (ವಿಜಯಕಾಂತ್), ಯಜಮಾನ (ರಜನೀಕಾಂತ್), ಸಕಲಕಲಾವಲ್ಲಭನ್ (ಕಮಲ್ ಹಾಸನ್), ಶಿವಾಜಿ ಗಣೇಶನ್ ಮತ್ತು ಅರ್ಜುನ್ ಸರ್ಜಾ ಅಭಿನಯದ ಅನೇಕ ಸಿನಿಮಾಗಳು.
ಸರವಣನ್ ಅವರಿಗೆ ಅಂತಿಮ ನಮನ ಸಲ್ಲಿಸಿದ ರಜನೀಕಾಂತ್, “ಸರವಣನ್ ಸರ್ ನನಗೆ ಅತಿ ಆಪ್ತರು. ಅವರೊಂದಿಗೆ ಒಂಬತ್ತು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಪ್ರತಿಯೊಂದೂ ಸೂಪರ್ಹಿಟ್. ನನ್ನ ಕಷ್ಟದ ವೇಳೆಯಲ್ಲಿ ನನ್ನ ಬೆನ್ನಿಗೆ ನಿಂತವರು. ಅವರನ್ನು ಕಳೆದುಕೊಂಡಿರುವುದು ನನಗೆ ವೈಯಕ್ತಿಕ ನಷ್ಟ.” ಎಂದು ಹೇಳಿದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಅರ್ಪಿಸಿ, ತನ್ನ ತಂದೆ ಕರುಣಾನಿಧಿ ಮತ್ತು ಎವಿಎಂ ನಡುವಿನ ಆಪ್ತ ಸಂಬಂಧದ ನೆನಪುಗಳನ್ನು ಸ್ಮರಿಸಿದ್ದಾರೆ. “ಸರವಣನ್ ಅವರ ಅಗಲಿಕೆಯಿಂದ ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟ,” ಎಂದಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಮಹತ್ವದ ಶಿಲ್ಪಿಯೊಬ್ಬರು ಅಗಲಿದ್ದು, ಚಿತ್ರರಂಗದ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ನಾಯಕ ಮತ್ತು ಮಾರ್ಗದರ್ಶಕ : ರಾಯ್ಪುರದಲ್ಲಿ ಕೊಹ್ಲಿಯ ‘ಡಬಲ್ ರೋಲ್’ಗೆ ಗವಾಸ್ಕರ್ ಮೆಚ್ಚುಗೆ



















