ಚೆನ್ನೈ : ದಕ್ಷಿಣ ಭಾರತದ ಚಿತ್ರರಂಗದ ಅದ್ಭುತ ಕಥೆಗಾರ, ಕ್ರಾಂತಿಕಾರಿ ಚಲನಚಿತ್ರ ನಿರ್ದೇಶಕ ಹಾಗೂ ಹಿರಿಯ ನಟ ಪದ್ಮಶ್ರೀ ಭಾರತಿರಾಜ (84) ಅವರು ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಇಂಗು (ಬುಧವಾರ) ಮುಂಜಾನೆ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ತಮಿಳು ಚಿತ್ರರಂಗದಲ್ಲಿ ‘ಇಯಕ್ಬು ನರ್ ಇಮಯಮ್’ (ನಿರ್ದೇಶಕರ ಶಿಖರ) ಎಂದೇ ಖ್ಯಾತರಾಗಿದ್ದ ಭಾರತಿರಾಜ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸ್ಟುಡಿಯೋ ಗಡಿಯಿಂದ ಹಳ್ಳಿಯ ಮಣ್ಣಿಗೆ ಸಿನಿಮಾ ತಂದವರು
1970ರ ದಶಕದಲ್ಲಿ ಸಿನಿಮಾಗಳು ಕೇವಲ ಸ್ಟುಡಿಯೋಗಳ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ, ಕ್ಯಾಮೆರಾಗಳನ್ನು ಹಳ್ಳಿಗಳ ಮಣ್ಣಿನ ಸೊಗಡಿಗೆ, ಪ್ರಕೃತಿಯ ಮಡಿಲಿಗೆ ಕೊಂಡೊಯ್ದು ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಶ್ರೇಯಸ್ಸು ಭಾರತಿರಾಜ ಅವರಿಗೆ ಸಲ್ಲುತ್ತದೆ. 1977ರಲ್ಲಿ ಕಮಲ್ ಹಾಸನ್, ರಜನಿಕಾಂತ್ ಮತ್ತು ಶ್ರೀದೇವಿ ಅಭಿನಯದ ’16 ವಯದಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಅವರು, ನೈಜ ಮತ್ತು ಗ್ರಾಮೀಣ ಬದುಕಿನ ಕಥೆಗಳಿಗೆ ಜೀವ ತುಂಬಿದರು. ‘ಸಿಗಪ್ಪು ರೋಜಾಕ್ಕಲ್’, ‘ಅಲೈಗಳ್ ಒಯ್ವದಿಲ್ಲೈ’ ಮತ್ತು ‘ಮುದಲ್ ಮರಿಯಾದೈ’ ಸೇರಿದಂತೆ 40ಕ್ಕೂ ಹೆಚ್ಚು ಅದ್ಭುತ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಅವರಿಗೆ 6 ರಾಷ್ಟ್ರ ಪ್ರಶಸ್ತಿಗಳು ಹಾಗೂ 2004ರಲ್ಲಿ ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ ಒಲಿದುಬಂದಿತ್ತು.

ಈಡೇರದೆ ಉಳಿದ ಆ ಕನಸು
ಭಾರತಿರಾಜ ಅವರ ನಿಧನಕ್ಕೆ ಹಿರಿಯ ನಟಿ, ರಾಜಕಾರಣಿ ಖುಷ್ಬೂ ಸುಂದರ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪತ್ರ ಬರೆದಿದ್ದಾರೆ. “ನಮ್ಮ ಪ್ರೀತಿಯ, ಗೌರವಾನ್ವಿತ ದಂತಕಥೆ ಭಾರತಿರಾಜ ಸರ್ ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿ ಕೇಳಿ ಮನಸ್ಸು ಚೂರಾಗಿದೆ. ತಮಿಳು ಚಿತ್ರರಂಗದ ಮೇಲೆ ಕತ್ತಲೆಯ ಮೋಡ ಕವಿದಂತಾಗಿದೆ. ಅವರ ಸಿನಿಮಾಗಳು ಚಿತ್ರರಂಗದ ನಿಜವಾದ ಪಾಠಶಾಲೆಗಳಾಗಿದ್ದವು” ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಅವರ ಕೊನೆಯ ಆಸೆಯೊಂದನ್ನು ನೆನೆದ ಖುಷ್ಬೂ, “ಅವರು ಯಾವಾಗಲೂ ನನ್ನನ್ನು ನೋಡಿ ‘ನಿನಗೆ ಎರಡು ಜುಟ್ಟು ಹಾಕಿ ಒಂದು ಸಿನಿಮಾ ಮಾಡೋಣ’ ಎನ್ನುತ್ತಿದ್ದರು. ಆದರೆ ಆ ಆಸೆ ಈಗ ಎಂದಿಗೂ ಈಡೇರದ ಕನಸಾಗಿಯೇ ಉಳಿದುಬಿಟ್ಟಿತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಸರ್” ಎಂದು ಕಂಬನಿ ಮಿಡಿದಿದ್ದಾರೆ.
ವೈಯಕ್ತಿಕ ನೋವಿನಿಂದ ನಟನೆಯತ್ತ ಪಯಣ
ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತಿರಾಜ ಅವರಿಗೆ 2025ರ ಆರಂಭದಲ್ಲಿ ದೊಡ್ಡ ಆಘಾತ ಎದುರಾಗಿತ್ತು. ಅವರ ಪುತ್ರ, ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಮಗನ ಅಗಲಿಕೆಯ ದುಃಖ ಭಾರತಿರಾಜ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು ಎನ್ನಲಾಗಿದೆ. ಇನ್ನು ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದ ಭಾರತಿರಾಜ ಅವರು ಇತ್ತೀಚಿನ ಸೂಪರ್ ಹಿಟ್ ಚಿತ್ರ ‘ಮಹಾರಾಜ’ ಮತ್ತು ಮೋಹನ್ ಲಾಲ್ ಅಭಿನಯದ ‘ತುಡರುಮ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ಕಮಲ್ ಹಾಸನ್ ಮುಂತಾದವರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ದಂತಕಥೆಯ ನಿರ್ಗಮನದೊಂದಿಗೆ ಚಿತ್ರರಂಗದ ಸುವರ್ಣ ಯುಗವೊಂದು ಅಂತ್ಯವಾದಂತಾಗಿದೆ.
ಇದನ್ನೂ ಓದಿ : ಅಪಾಚೆ ಹೆಲಿಕಾಪ್ಟರ್ ಪತನಕ್ಕೆ ಅಮೆರಿಕ ಪ್ರತೀಕಾರ : F-35 ಹ್ಯಾಂಗರ್, US ನೆಲೆಗಳ ಮೇಲೆ ಇರಾನ್ ಪ್ರತಿದಾಳಿ!



















