ಚಂಡೀಗಢ: ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವಾಗಿ ನೇರವಾಗಿ ರಾಷ್ಟ್ರಪತಿಗಳ ಆಡಳಿತಕ್ಕೆ ಒಳಪಡಿಸುವ ಕೇಂದ್ರ ಸರ್ಕಾರದ ಪ್ರಸ್ತಾಪದ ವಿರುದ್ಧ ಪಂಜಾಬ್ನಲ್ಲಿ ಭಾರಿ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಡಿಸೆಂಬರ್ 1 ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2025’ ಅನ್ನು ಮಂಡಿಸಲು ಸಿದ್ಧತೆ ನಡೆಸಿದ್ದು, ಇದು ಪಂಜಾಬ್ನ ರಾಜಧಾನಿಯನ್ನು ಕಸಿದುಕೊಳ್ಳುವ ಸಂಚು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಗಂಭೀರ ಆರೋಪ ಮಾಡಿದ್ದಾರೆ.
ಏನಿದು ವಿವಾದ?
ಪ್ರಸ್ತುತ ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿರುವ ಚಂಡೀಗಢದ ಆಡಳಿತವನ್ನು ಪಂಜಾಬ್ ರಾಜ್ಯಪಾಲರು ನೋಡಿಕೊಳ್ಳುತ್ತಿದ್ದಾರೆ. ಆದರೆ, ಹೊಸ ಮಸೂದೆಯ ಮೂಲಕ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯ ವ್ಯಾಪ್ತಿಗೆ ತರಲು ಕೇಂದ್ರ ಮುಂದಾಗಿದೆ. ಈ ವಿಧಿಯು ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪಗಳಂತೆ ಚಂಡೀಗಢದ ಶಾಂತಿ, ಪ್ರಗತಿ ಮತ್ತು ಉತ್ತಮ ಆಡಳಿತಕ್ಕಾಗಿ ನೇರವಾಗಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ. ಇದು ಪಂಜಾಬ್ನ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಎಂಬುದು ರಾಜ್ಯದ ಪ್ರಮುಖ ಪಕ್ಷಗಳ ವಾದವಾಗಿದೆ.
ಸಿಎಂ ಭಗವಂತ್ ಮಾನ್ ಆಕ್ರೋಶ
ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, “ಕೇಂದ್ರ ಸರ್ಕಾರವು ಪಂಜಾಬ್ನ ರಾಜಧಾನಿಯನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿದೆ. ಚಂಡೀಗಢವನ್ನು ನಿರ್ಮಿಸಲು ನಮ್ಮ ಹಳ್ಳಿಗಳನ್ನು ನಾಶಪಡಿಸಲಾಗಿದೆ. ಇದರ ಮೇಲೆ ಕೇವಲ ಪಂಜಾಬ್ಗೆ ಮಾತ್ರ ಹಕ್ಕಿದೆ. ಚಂಡೀಗಢ ಎಂದೆಂದೂ ಪಂಜಾಬ್ನ ಭಾಗ, ಮುಂದೆಯೂ ಹಾಗೆಯೇ ಇರಲಿದೆ. ನಾವು ಯಾವುದೇ ಕಾರಣಕ್ಕೂ ಇದನ್ನು ಬಿಟ್ಟುಕೊಡುವುದಿಲ್ಲ,” ಎಂದು ಗುಡುಗಿದ್ದಾರೆ.
ಕೇಂದ್ರದ ವಿರುದ್ಧ ವಿಪಕ್ಷಗಳ ಒಗ್ಗಟ್ಟು
ಈ ವಿಷಯದಲ್ಲಿ ಆಡಳಿತಾರೂಢ ಎಎಪಿ ಮಾತ್ರವಲ್ಲದೆ, ಕಾಂಗ್ರೆಸ್ ಮತ್ತು ಅಕಾಲಿದಳ ಕೂಡ ಕೇಂದ್ರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. “ಇದು ಪಂಜಾಬ್ನ ಅಸ್ಮಿತೆಯ ಮೇಲಿನ ದಾಳಿ. ಪಂಜಾಬಿಗರು ಸರ್ವಾಧಿಕಾರಕ್ಕೆ ಎಂದಿಗೂ ತಲೆಬಾಗಿಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ದೇಶದ ಭದ್ರತೆ, ಅನ್ನ ಮತ್ತು ನೀರಿಗಾಗಿ ತ್ಯಾಗ ಮಾಡಿದ ಪಂಜಾಬ್ ಅನ್ನು ಅದರ ಹಕ್ಕಿನಿಂದ ವಂಚಿಸಲಾಗುತ್ತಿದೆ,” ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಇದನ್ನು “ಅನಗತ್ಯ ನಡೆ” ಎಂದು ಕರೆದರೆ, ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು ಈ ಮಸೂದೆಯನ್ನು “ಪಂಜಾಬ್ ವಿರೋಧಿ” ಮತ್ತು “ಒಕ್ಕೂಟ ವ್ಯವಸ್ಥೆಯ ಮೇಲಿನ ನೇರ ದಾಳಿ” ಎಂದು ಬಣ್ಣಿಸಿದ್ದಾರೆ.
1966ರಲ್ಲಿ ಹರ್ಯಾಣ ರಾಜ್ಯ ರಚನೆಯಾದಾಗ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು. ಅಂದಿನಿಂದಲೂ ಪಂಜಾಬ್ ರಾಜಕೀಯ ನಾಯಕರು ಚಂಡೀಗಢ ಸಂಪೂರ್ಣವಾಗಿ ಪಂಜಾಬ್ಗೆ ಸೇರಬೇಕು ಮತ್ತು ಹರ್ಯಾಣಕ್ಕೆ ಪ್ರತ್ಯೇಕ ರಾಜಧಾನಿ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಈಗ ಕೇಂದ್ರದ ಈ ಹೊಸ ನಡೆಯು ದಶಕಗಳ ಹಳೆಯ ವಿವಾದಕ್ಕೆ ಹೊಸ ಕಿಚ್ಚು ಹಚ್ಚಿದೆ.
ಇದನ್ನೂ ಓದಿ: ಸಿದ್ದು, ಡಿಕೆ ಟೀಂ ಬಣ ಬಡಿದಾಟಕ್ಕೆ ಫುಲ್ ಸ್ಟಾಪ್ : ಫೈನಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿದ್ದು



















