ಬೆಂಗಳೂರು: ಕರ್ನಾಟಕ ಸೇರಿ ದೇಶಾದ್ಯಂತ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದೆ. ದೇಶಾದ್ಯಂತ ಲಕ್ಷಾಂತರ ಜೋಡಿಗಳು ಹಸೆಮಣೆ ಏರಲು ದಿನಗಣನೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ, ಸರಳವಾಗಿ ಮದುವೆಯಾಗುವವರಿಗೆ ರಾಜ್ಯ ಸರ್ಕಾರದಿಂದಲೇ 50 ಸಾವಿರ ರೂಪಾಯಿ ಸಹಾಯಧನ ಸಿಗುತ್ತದೆ. ಏನಿದು ಯೋಜನೆ? ಯೋಜನೆಯ ಲಾಭ ಪಡೆಯುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಸರಳವಾಗಿ ವಿವಾಹವಾಗುವವರಿಗೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರವು ಸರಳ ವಿವಾಹ ಯೋಜನೆ ಜಾರಿಗೆ ತಂದಿದೆ. ಸರಳ ವಿವಾಹ ಯೋಜನೆಯು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಉಪಕ್ರಮವಾಗಿದೆ. ಯೋಜನೆ ಅನ್ವಯ, ಸರಳ ವಿವಾಹ ಸಮಾರಂಭವನ್ನು ಆಯ್ಕೆ ಮಾಡಿಕೊಳ್ಳುವ ಪರಿಶಿಷ್ಟ ವರ್ಗಕ್ಕೆ ಸೇರಿದ ದಂಪತಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಅಂದರೆ, ನೋಂದಾಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ವರ್ಗದ ದಂಪತಿಗೆ 50 ಸಾವಿರ ರೂಪಾಯಿಯನ್ನು ಸರ್ಕಾರವೇ ನೀಡುತ್ತದೆ. ಮದುವೆಯಾಗಬೇಕು ಎಂದು ಪ್ಲಾನ್ ಮಾಡುತ್ತಿರುವವರು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ https://swd.karnataka.gov.in/ ಗೆ ಭೇಟಿ ನೀಡಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಹಾಕಬಹುದಾಗಿದೆ.
ಮದುವೆಯಾದ ಒಂದು ವರ್ಷದೊಳಗೆ ಅರ್ಜಿಗಳನ್ನು ಸಲ್ಲಿಸಿದ ನವ ದಂಪತಿಗೆ ಮಾತ್ರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಸರಳವಾಗಿ ಮದುವೆಯಾಗುವರಲ್ಲಿ ಯುವಕನ ವಯಸ್ಸು 21-45 ವರ್ಷ, ಯುವತಿಯ ವಯಸ್ಸು 18-42 ವರ್ಷದೊಳಗೆ ಇರಬೇಕು ಎಂದು ತಿಳಿಸಲಾಗಿದೆ. ಪರಿಶಿಷ್ಟರಿಗೆ ಮಾತ್ರ ಯೋಜನೆಯ ಸೌಲಭ್ಯ ಸಿಗಲಿದೆ. ಉಳಿದವರಿಗೆ ಯೋಜನೆಯ ಲಾಭ ಸಿಗುವುದಿಲ್ಲ.
ಇದನ್ನೂ ಓದಿ: ಆ್ಯಶಸ್ ಟೆಸ್ಟ್ನಲ್ಲಿ ಹೆಡ್ ಸ್ಫೋಟಕ ಶತಕ | ಇಂಗ್ಲೆಂಡ್ ವಿರುದ್ಧ ಆಸೀಸ್ಗೆ 8 ವಿಕೆಟ್ ಜಯ.. ಎರಡೇ ದಿನಕ್ಕೆ ಮುಗಿದ ಪಂದ್ಯ!



















