ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಇಂದು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ತಮ್ಮ ಅಂತಿಮ ಕ್ಷಣದಲ್ಲಿ ಭಾವುಕರಾಗಿದ್ದ ವೃಕ್ಷಮಾತೆ, ಕರ್ನಾಟಕ ರಾಜ್ಯದ ಜನತೆಗೆ ಭಾವನಾತ್ಮಕ ಸಂದೇಶವೊಂದನ್ನು ನೀಡಿದ್ದಾರೆ.
ಪ್ರೀತಿಯ ನನ್ನ ನಾಡಿನ ಜನತೆಗೆ ನಿಮ್ಮ ಪ್ರೀತಿಯ ಅಜ್ಜಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇರುವಷ್ಟು ದಿನ ಯಾರಿಗೂ ತೊಂದರೆ ಕೊಡದೆ, ಹಿಂಸೆಯಾಗದಂತೆ, ಬಡವ, ಶ್ರೀಮಂತ, ಭಿಕ್ಷುಕ, ಅಸಹಾಯಕ ಎನ್ನದೆ ಎಲ್ಲರೂ ಒಂದೇ ತರಹ ಬದುಕಿ. ಎಲ್ಲರನ್ನು ಗೌರವಿಸಿ, ಪ್ರೀತಿಸಿ, ದೇಶವನ್ನು ಪ್ರೀತಿಸಿ, ದೇಶ ಚೆನ್ನಾಗಿದ್ದರೆ ಎಲ್ಲರೂ ಚಂದ.

ಚಿಕ್ಕವರಾಗಲಿ, ದೊಡ್ಡವರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ, ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿ, ಗೋ ಕಟ್ಟೆಗಳನ್ನು ಕಟ್ಟಿಸಿ, ಕೆರೆ ಕಟ್ಟಿಸುವುದರ ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ. ಹಣ್ಣು ಬಿಡುವ ಮರಗಳನ್ನು ಬೆಳೆಸಿ ಹಕ್ಕಿಪಕ್ಷಿಗಳ ಆಧಾರವಾಗಲಿ. ದೇಶದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ. ದೇಶ ಚೆನ್ನಾಗಿರಲಿ. ಬಡವನನ್ನು ಕಂಡು ಭಿನ್ನ ಭೇದ ಮಾಡಬೇಡಿ. ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ. ನಾನು ಮಾಡಿದ ಗಿಡ ನೆಡುವ ಉಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ ಮತ್ತು ನನ್ನ ಮಗನಾದ ಉಮೇಶ ದೇಶದಲ್ಲೆಲ್ಲಾ ಗಿಡ ನೆಡುವ ಮತ್ತು ನೆಡೆಸುವ ಕಾರ್ಯ ಮಾಡುತ್ತಾ ಸಾಗು.
ಮತ್ತೊಮ್ಮೆ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ಎಲ್ಲರಿಗೂ ಸತಿವತಿ ಭಾಗ್ಯ ಇರಲಿ. ಮಕ್ಕಳ ಭಾಗ್ಯವಿರಲಿ, ನಿಮ್ಮ ಮನೆ ಚೆನ್ನಾಗಿರಲಿ, ದೇಶ ಚೆನ್ನಾಗಿರಲಿ, ಮಕ್ಕಳಿಗೆಲ್ಲ ಒಳ್ಳೆಯ ವಿದ್ಯೆ ಬರಲಿ, ಎಲ್ಲರೂ ಗಿಡ ಮರಗಳನ್ನು ಬೆಳೆಸಿ. ನನ್ನ ಪತಿ ದೇವರ ಆಶೀರ್ವಾದ ಮತ್ತು ನನ್ನ ಆಶೀರ್ವಾದ ನನ್ನ ಮಗನ ಮೇಲಿರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಾಲುಮರದ ತಿಮ್ಮಕ್ಕ ಅವರು ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಸಾಲುಮರದ ತಿಮ್ಮಕ್ಕ ನಿಧನಕ್ಕೆ ಸಿಎಂ, ಸಚಿವ ಈಶ್ವರ ಖಂಡ್ರೆ ಸೇರಿ ಗಣ್ಯರಿಂದ ಸಂತಾಪ



















