ಪಾಟ್ನಾ: ಹೈವೋಲ್ಟೇಜ್ ಪ್ರಚಾರದ ಬಳಿಕ ಇದೀಗ ಬಿಹಾರ ವಿಧಾನಸಭೆ ಚುನಾವಣೆ ಆರಂಭವಾಗಿದ್ದು, 243 ವಿಧಾನಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳ ಜನ ಹಕ್ಕು ಚಲಾಯಿಸುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮತ್ತೊಂದು ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪ್ರಬಲ ಪೈಪೋಟಿ ನೀಡುತ್ತಿದೆ. ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ. 13.13ರಷ್ಟು ಮತದಾನ ದಾಖಲಾಗಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಪ್ರಮುಖ ನಾಯಕರು ಈಗಾಗಲೇ ತಮ್ಮ ಮತ ಚಲಾಯಿಸಿದ್ದಾರೆ. “ಮತ ಚಲಾಯಿಸಿ ಮತ್ತು ಇತರರಿಗೂ ಮತ ಚಲಾಯಿಸಲು ಪ್ರೇರೇಪಿಸಿ” ಎಂದು ನಿತೀಶ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಶಾಯಿ ಹಚ್ಚಿದ ಬೆರಳಿನೊಂದಿಗೆ ಕುಟುಂಬದ ಫೋಟೋ ಹಂಚಿಕೊಂಡ ಲಾಲು ಯಾದವ್, “ತವಾದಲ್ಲಿ ರೊಟ್ಟಿ ತಿರುಗುತ್ತಲೇ ಇರಬೇಕು, ಇಲ್ಲದಿದ್ದರೆ ಅದು ಸುಟ್ಟುಹೋಗುತ್ತದೆ. 20 ವರ್ಷಗಳು ಬಹಳ ದೀರ್ಘ ಕಾಲ! ಈಗ, ಯುವ ಸರ್ಕಾರ ಮತ್ತು ಹೊಸ ಬಿಹಾರಕ್ಕಾಗಿ ತೇಜಸ್ವಿ ಸರ್ಕಾರ ಅತ್ಯಂತ ಅವಶ್ಯಕ” ಎಂದು ಹೇಳುವ ಮೂಲಕ ಬದಲಾವಣೆಗೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಮತದಾರರಿಗೆ ಈ “ಪ್ರಜಾಪ್ರಭುತ್ವದ ಹಬ್ಬದಲ್ಲಿ” ಪೂರ್ಣ ಉತ್ಸಾಹದಿಂದ ಮತ ಚಲಾಯಿಸುವಂತೆ ಮನವಿ ಮಾಡಿದ್ದು, ಎನ್ಡಿಎ ಮೈತ್ರಿಕೂಟ ಅಭೂತಪೂರ್ವ ಬಹುಮತದೊಂದಿಗೆ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1.3 ಕೋಟಿ ಉದ್ಯೋಗಗಳು) ಎಂಬ ಅಭೂತಪೂರ್ವ ಭರವಸೆಯನ್ನು ನೆಚ್ಚಿಕೊಂಡಿರುವ ಮಹಾಘಟಬಂಧನ್, ಎನ್ಡಿಎಯನ್ನು ಮೀರಿಸುವ ನಿರೀಕ್ಷೆಯಲ್ಲಿದೆ. 2020ರಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆರ್ಜೆಡಿ, ಯುವ ಮತದಾರರನ್ನು ಸೆಳೆಯಲು ತೇಜಸ್ವಿ ಯಾದವ್ ನೇತೃತ್ವದಲ್ಲಿ ತೀವ್ರ ಪ್ರಚಾರ ನಡೆಸಿತ್ತು.
ಇತ್ತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಬಲದೊಂದಿಗೆ ಎನ್ಡಿಎ ಭರ್ಜರಿ ಪ್ರಚಾರ ನಡೆಸಿದೆ. ಆರು ಬಾರಿ ಮುಖ್ಯಮಂತ್ರಿಯಾಗಿರುವ 74 ವರ್ಷದ ನಿತೀಶ್ ಕುಮಾರ್ ಅವರನ್ನು ಈ ಬಾರಿ ಕೈಬಿಡಬಹುದು ಎಂಬ ವದಂತಿಗಳಿದ್ದವು. ಆದರೆ, ಅಂತಿಮ ಕ್ಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ಈ ಬಾರಿಯೂ ಚುನಾವಣೆ ಎದುರಿಸಲಿದ್ದೇವೆ ಎಂದು ಘೋಷಿಸಿದ್ದರು.
ಈ ಚುನಾವಣೆಯಲ್ಲಿ ಚುನಾವಣಾ ವ್ಯೂಹರಚನೆಗಾರ ಪ್ರಶಾಂತ್ ಕಿಶೋರ್ ಅವರ ‘ಜನ ಸ್ವರಾಜ್’ ಪಕ್ಷವು ‘ಎಕ್ಸ್ ಫ್ಯಾಕ್ಟರ್’ ಎಂದು ಪರಿಗಣಿಸಲ್ಪಟ್ಟಿದೆ. ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಅವರ ಪಕ್ಷವು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ. ತಮ್ಮ ಪಕ್ಷವು 10ಕ್ಕಿಂತ ಕಡಿಮೆ ಅಥವಾ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಚುನಾವಣೆಯ ಮೊದಲು ಅಥವಾ ನಂತರ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಿಶೋರ್ ಹೇಳಿದ್ದಾರೆ.
ನಿರುದ್ಯೋಗ, ವಲಸೆ, ಭ್ರಷ್ಟಾಚಾರ, ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳೇ ಈ ಚುನಾವಣೆಯ ಪ್ರಮುಖ ಚರ್ಚಾಂಶಗಳಾಗಿವೆ. ಎನ್ಡಿಎ 1 ಕೋಟಿ ಉದ್ಯೋಗ ಮತ್ತು 1 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಭರವಸೆ ನೀಡಿದೆ. 2020ರಲ್ಲಿ, ಇಂದು ಮತದಾನ ನಡೆಯುತ್ತಿರುವ 121 ಸ್ಥಾನಗಳ ಪೈಕಿ ಮಹಾಘಟಬಂಧನ್ 63 ಸ್ಥಾನಗಳನ್ನು ಗೆದ್ದರೆ, ಎನ್ಡಿಎ 55 ಸ್ಥಾನಗಳಲ್ಲಿ ಜಯಗಳಿಸಿತ್ತು.
ಇದನ್ನೂ ಓದಿ : ರಾಯಚೂರು ವಿಶ್ವವಿದ್ಯಾಲಯದಲ್ಲಿ 24 ಅಸಿಸ್ಟಂಟ್ ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ



















