ಬೆಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಕ್ಟೋಬರ್ ಅಂತ್ಯದೊಳಗೆ ತನ್ನ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ವಿಶೇಷ ತನಿಖಾ ತಂಡವು ಅಕ್ಟೋಬರ್ನಲ್ಲಿ ವರದಿ ನೀಡುವುದಾಗಿ ಹೇಳಿದೆ. ಅಕ್ಟೋಬರ್ 31ರ ಮೊದಲು ಅಥವಾ ಎರಡು ದಿನಗಳು ತಡವಾಗಿ ವರದಿ ನೀಡಬಹುದು. ಸಮಗ್ರವಾಗಿ ವರದಿ ಮಾಡಿ ಅಂತಿಮ ವರದಿ ಸಲ್ಲಿಸಲು ನಾವು ಅವರಿಗೆ ಹೇಳಿದ್ದೇವೆ. ಅಕ್ಟೋಬರ್ನಲ್ಲಿ ಕೆಲಸವನ್ನು ಪೂರ್ಣಗೊಳಿಸುವುದಾಗಿ ಅವರೂ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಗಳು, ರಾಸಾಯನಿಕ ವಿಶ್ಲೇಷಣೆ ಮತ್ತು ಇತರವುಗಳನ್ನು ಪಡೆದ ನಂತರ ವರದಿಯನ್ನು ಸಲ್ಲಿಸಲಾಗುವುದು ಎಂದು ಎಸ್ಐಟಿ ಹೇಳಿದ್ದು, ಸಂಗ್ರಹಿಸಿದ ಮೂಳೆಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ತೀರ್ಮಾನಿಸಬೇಕು. ಇದೆಲ್ಲವನ್ನೂ ಪೂರ್ಣಗೊಳಿಸಿದ ನಂತರ, ಅವರು ವರದಿಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಬಹುಶಃ ಈ ತಿಂಗಳ ಅಂತ್ಯದ ವೇಳೆಗೆ ವರದಿ ಬರುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ತನಿಖೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಒಂದೇ ವರದಿಯಲ್ಲಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಐಟಿ ಅಂತಿಮ ವರದಿಯನ್ನು ಸಲ್ಲಿಸುತ್ತದೆಯೇ ಅಥವಾ ತನಿಖೆಯ ಎಲ್ಲಾ ಪ್ರಮುಖ ಮಾಹಿತಿಯೊಂದಿಗೆ ಮಧ್ಯಂತರ ವರದಿಯನ್ನು ಸಲ್ಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಬಿಹಾರ ಎಲೆಕ್ಷನ್ ರಿಸಲ್ಟ್ ಮರುದಿನವೇ ಸಿಎಂ ಸಿದ್ದರಾಮಯ್ಯ ದೆಹಲಿಗೆ.. ತೀವ್ರ ಕುತೂಹಲ!



















