ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಸಚಿವರ ಡಿನ್ನರ್ ಪಾರ್ಟಿ ಅಂತೂ ಇಂತೂ ಅಂತ್ಯವಾಗಿದೆ. ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಕೊಟ್ಟಿದ್ದು, ಇದೇ ವೇಳೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಚರ್ಚೆಯಾಗುತ್ತಿರುವ ಸಂಪುಟ ಪುನಾರಚನೆ ಬಗ್ಗೆಯೂ ಸಿಎಂ ಪ್ರಸ್ತಾಪ ಮಾಡಿದ್ದು, ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಸಚಿವರಿಗೆ ಸಂಪುಟ ಪುನಾರಚನೆ ಬಗ್ಗೆ ಸುಳಿವು ನೀಡಿದ್ದಾರೆ.

ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು?
ನಿನ್ನೆ ನಡೆದ ಡಿನ್ನರ್ ಪಾರ್ಟಿ ವೆರೈಟಿ ಊಟದ ಜೊತೆಗೆ ಪ್ರಸಕ್ತ ರಾಜಕೀಯ ಚಟುವಟಿಕೆಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಆಗಿವೆ. ಸಿಎಂ ಸಿದ್ದರಾಮಯ್ಯನವರು ಸಚಿವರಿಗೆ ಕೆಲ ಕಿವಿಮಾತು ಹೇಳಿದ್ದಾರೆ. ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ತೆಗೆದುಕೊಳ್ಳಲು ಸಿದ್ಧರಾಗಿ ಎಂದು ಸೂಚಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಪ್ರಮುಖ 6 ವಿಷಯಗಳ ಬಗ್ಗೆ ಚರ್ಚೆ :
ಊಟದ ಜೊತೆ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಆಸ್ತಿಗಳಲ್ಲಿ RSS ಚಟುವಟಿಕೆಗೆ ನಿರ್ಬಂಧ, , ಸಚಿವ ಸಂಪುಟ ಪುನರ್ ರಚನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ, ಬಿಹಾರ್ ವಿಧಾನಸಭೆ ಚುನಾವಣೆ ಹಾಗೂ ಅನುದಾನ ಬಳಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ಸಚಿವರಿಗೆ ಸಿಎಂ ಕಿವಿಮಾತು :
ಸರ್ಕಾರದ ಬಂದು ಎರಡೂವರೆ ವರ್ಷ ಆಗುತ್ತಿದೆ. ಇದು ನಿಮಗೂ ಗೊತ್ತಿರೋದೆ. ಆದರೆ ನಿಮ್ಮ ಇಲಾಖೆಗಳಲ್ಲಿ ಸುಧಾರಣೆ ತನ್ನಿ. ಬಿಜೆಪಿ ದುರಾಡಳಿತವನ್ನ ನೋಡಿ ಜನ ನಮ್ಮ ಕೈ ಹಿಡಿದಿದ್ದಾರೆ. ಜನಸಾಮಾನ್ಯರ ಪರ ಸರ್ಕಾರ ಇರಬೇಕಾಗುತ್ತದೆ. ಇಲಾಖೆಗಳ ಮೂಲಕ ಜನರ ಕೆಲಸ ಮಾಡಿ. ಇಲಾಖೆಗೂ ಒಳ್ಳೆಯ ಹೆಸರು ತನ್ನಿ, ಸರ್ಕಾರಕ್ಕೂ ಉತ್ತಮ ಹೆಸರು ತನ್ನಿ. ಗ್ಯಾರೆಂಟಿಗಳಿಂದ ಸ್ವಲ್ಪ ಅಭಿವೃದ್ಧಿ ಹಿನ್ನಡೆಯಾಗಿರಬಹುದು. ಈಗ ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ. ಆದಾಯದ ಮಾರ್ಗಗಳೂ ಓಪನ್ ಆಗುತ್ತಿವೆ. ಇಲಾಖೆಯಲ್ಲಿರುವ ಹಣ ಸದ್ಬಳಕೆ ಮಾಡಿ. ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡೋಣ ಎಂದು ಎಂದು ಹೇಳಿದ್ದಾರೆ.
ಸಂಪುಟ ಪುನರ್ ರಚನೆ ಬಗ್ಗೆ ಪ್ರಸ್ತಾಪ :
ಡಿನ್ನರ್ ಪಾರ್ಟಿಯಲ್ಲಿ ಸಂಪುಟ ಪುನಾರಚನೆ ವಿಚಾರವನ್ನ ಖುದ್ದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಸಂಪುಟ ಪುನಾರಚನೆ ಆಗಲಿದೆ, ಸಿದ್ಧವಾಗಿರಿ ಎಂದು ಸಂಪುಟ ಸಹದ್ಯೋಗಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವಕಾಶ ಇದ್ದಾಗ ಚೆನ್ನಾಗಿ ಕೆಲಸ ಮಾಡಿ. ಹೈಕಮಾಂಡ್ ಕೂಡ ಎಲ್ಲವನ್ನ ಗಮನಿಸುತ್ತಿದೆ. ಸಂಪುಟ ಪುನರ್ ರಚನೆ ಮಾಧ್ಯಮಗಳ ವರದಿ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಮಯ ಬಂದಾಗ ವರಿಷ್ಠರು ನಿರ್ಧಾರ ಮಡುತ್ತಾರೆ. ಈಗ ಅಭಿವೃದ್ಧಿಯ ಕಡೆ ನಿಮ್ಮ ಗಮನವಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ ಬಳಿಕ ಸಚಿವರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ.
ಬಿಹಾರ ಚುನಾವಣೆ ಬಗ್ಗೆ ಚರ್ಚೆ :
ಇನ್ನು ಔತಣಕೂಟದಲ್ಲಿ ಬಿಹಾರ್ ಚುನಾವಣೆ ಬಗ್ಗೆ ಚರ್ಚೆಯಾಗಿದ್ದು, ಬಿಹಾರ ಚುನಾವಣೆಗೆ ಎಲ್ಲರ ಸಹಕಾರವಿರಲಿ-ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ನಿಂದ ಯಾವಾಗ ಬೇಕಾದ್ರೂ ಸೂಚನೆ ಬರಬಹುದು. ಹೈಕಮಾಂಡ್ನಿಂದ ಸೂಚನೆ ಬಂದಾಗ ಪ್ರಚಾರಕ್ಕೆ ಅಲ್ಲಿಗೆ ಹೋಗಬೇಕಾಗುತ್ತದೆ. ಚುನಾವಣಾ ಕೆಲಸಕ್ಕೂ ರೆಡಿ ಇರಬೇಕು. ನಿಮ್ಮ ಎಲ್ಲಾ ಸಹಕಾರವೂ ಬೇಕಿದೆ ಎಂದಿದ್ದಾರೆ.



















