ಬೆಂಗಳೂರು : ಬೆಂಗಳೂರಿನ ಫ್ಲೈಓವರ್ ಮೇಲೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಮೊಳೆಗಳನ್ನು ಸುರಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ವಾಹನ ಚಾಲಕರಿಂದ ಸುಲಿಗೆ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ವಿಡಿಯೋ ಎಕ್ಸ್ ನಲ್ಲಿ 60 ಸಾವಿರಕ್ಕೂ ಹೆಚ್ಚು ವಿವ್ಯೂ ಪಡೆದುಕೊಂಡಿದೆ.
ಮಂದರಗಿರಿ ಬೆಟ್ಟದ ಬಳಿಯ ಬೆಂಗಳೂರಿನ ಫ್ಲೈಓವರ್ನ ರಸ್ತೆಯಲ್ಲಿ ಸುಮಾರು ಅರ್ಧ ಕೆಜಿಗೂ ಹೆಚ್ಚು ತೂಕದ ಮೊಳೆಗಳನ್ನು ಎಸೆದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋಗೆ ಹಲವು ಬೈಕ್ ಹಾಗೂ ಕಾರು ಚಾಲಕರು ಪ್ರತಿಕ್ರಿಯೆ ನೀಡಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೋವನ್ನು ಪ್ರವಾಸದಿಂದ ಹಿಂತಿರುಗುತ್ತಿದ್ದ ಯುವಕರ ಗುಂಪೊಂದು ರೆಕಾರ್ಡ್ ಮಾಡಿದ್ದು, ಐಕಿಯಾ ಶೋ ರೂಂ ಬಳಿಯ ರಸ್ತೆಗೆ ಮೊಳೆ ತಗುಲಿ ಹಠಾತ್ ಟೈರ್ ಪಂಕ್ಚರ್ ಆಗಿರುವುದನ್ನು ಇಲ್ಲಿ ವಿವರಿಸಲಾಗಿದೆ. ಅದೃಷ್ಟವಶಾತ್, ಪ್ರವಾಸಕ್ಕೆ ಹೊರಟ್ಟಿದ್ದ ಯುವಕರು ಒಂದು ಎಕ್ಸ್ ಟ್ರಾ ಟ್ಯೂಬ್ ಅನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರಿಂದ ಮಾರ್ಗದಲ್ಲಿಯೇ ಬದಲಾವಣೆ ಮಾಡಿಕೊಂಡು ಮುಂದೇ ಸಾಗಿದ್ದಾರೆ.
ಈ ವೇಳೆ ಯುವಕರು ರಸ್ತೆ ತುಂಬೆಲ್ಲಾ ಹಲವು ಭಾಗಗಳಲ್ಲಿ ಮೊಳೆಗಳನ್ನು ಎಸೆದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ರಾಶಿ ರಾಶಿ ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಇರಿಸಲಾಗಿದ್ದು, ಪ್ರಯಾಣಿಕರಿಗೆ ಇದು ಭಾರೀ ತೊಂದರೆಯನ್ನು ಉಂಟು ಮಾಡುತ್ತಿದೆ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.
ಇದರ ನಡುವೆಯೇ ಅದೇ ಮಾರ್ಗವಾಗಿ ಬಂದ ಸೈಕ್ಲಿಸ್ಟ್ ಬಹುತೇಕ ಅದೇ ಸ್ಥಳದಲ್ಲಿ ಪಂಕ್ಚರ್ ಆಗಿರುವ ಟೈರ್ ಅನ್ನು ತೋರಿಸಿದ್ದಾರೆ. ಅಲ್ಲದೇ ಈ ಕೃತ್ಯ ವಾಹನ ಸವಾರರನ್ನು ಸುಲಿಗೆ ಮಾಡುವ ಅಥವಾ ವಂಚನೆ ಮಾಡುವ ದಂಧೆಯ ಒಂದು ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಈ ಸ್ಥಳದಲ್ಲಿ ತೊಂದರೆಗೆ ಒಳಗಾದರೆ ಅನಿವಾರ್ಯವಾಗಿ ಚಾಲಕರು ಪಂಚರ್ ಅಥವಾ ಟ್ಯೂಬ್ ಬದಲಿಸಿಕೊಳ್ಳಬೇಕಾಗುತ್ತದೆ. ಇದರಿಂದ ದುಷ್ಕರ್ಮಿಗಳು ಲಾಭ ಪಡೆದುಕೊಳ್ಳುವ ದುರುದ್ದೇಶವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.



















