ರಾಯಚೂರು : ಕಾಂತಾರ ಚಾಪ್ಟರ್ 1 ಸಿನಿಮಾ ನೋಡಲು ತೆರಳಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ದಾರುಣ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮೃತ ಯುವಕರನ್ನು ವೆಂಕಟೇಶ(28) ಮತ್ತು ಯಲ್ಲಾಲಿಂಗ(28) ಎಂದು ಗುರುತಿಸಲಾಗಿದೆ.
ಈ ಇಬ್ಬರು ಯುವಕರು ಕಾಂತಾರ ಸಿನಿಮಾ ನೋಡಲು ಮುದಗಲ್ನಿಂದ ಮಸ್ಕಿಗೆ ಬಂದಿದ್ದರು. ಆದರೆ, ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದಿದ್ದರಿಂದ ನಾಲೆಯಲ್ಲಿ ಈಜಾಡಿ, ನಂತರ ಸಂಜೆ ಸಿನಿಮಾ ನೋಡಲು ಪ್ಲ್ಯಾನ್ ಮಾಡಿಕೊಂಡಿದ್ದರು.
ಅದರಂತೆ ಈಜಲು ತೆರಳಿದ್ದ ಯಲ್ಲಾಲಿಂಗ, ಈಜು ಬಾರದಿದ್ದರಿಂದ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಈ ವೇಳೆ ಆತನನ್ನು ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ನೀರುಪಾಲಾಗಿದ್ದಾನೆ. ಇಬ್ಬರ ಮೃತದೇಹಗಳು ರಾಯಚೂರಿನ ಸಿರವಾರ ಬಳಿ ಪತ್ತೆಯಾಗಿವೆ. ಘಟನಾ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















