ಕೊಲ್ಲೂರು : ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಗಣಪತಿ ಪೂಜೆಯೊಂದಿಗೆ ನವರಾತ್ರಿ ಪರ್ವಕ್ಕೆ ಚಾಲನೆ ನೀಡಿ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು.
ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ, ಮಹಾನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತರಿಗೆ ಸೇವಾ-ಸೌಲಭ್ಯಗಳಲ್ಲಿ ಕೊರತೆಯಾಗದಂತೆ ದೇವಸ್ಥಾನ ಆಡಳಿತೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ ಇವತ್ತಿನಿಂದ ಪ್ರಾರಂಭವಾಗಿ ಅಗಸ್ಟ್ 2ರವರೆಗೂ ನಡೆಯಲಿದ್ದು, ದೇವಸ್ಥಾನದಲ್ಲಿ ದಿನಂಪ್ರತಿ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿವೆ ಎಂದು ಹೇಳಿದರು.
ಇನ್ನು, ಶ್ರೀ ದೇವಳದಲ್ಲಿ ಅಕ್ಟೋಬರ್ 1ರಂದು ಮಹಾನವಮಿ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ 1.30ರ ಧನುರ್ ಲಗ್ನದಲ್ಲಿ ರಥೋತ್ಸವ ಜರುಗಲಿದೆ. 2ರಂದು ವಿಜಯದಶಮಿ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಸಂಜೆ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ.
ಉತ್ಸವದ ಪ್ರಯುಕ್ತ ಪ್ರತಿದಿನ ಮಧ್ಯಾಹ್ಮ 3ರಿಂದ ರಾತ್ರಿ 11.30ರವರೆಗೆ ಸ್ವರ್ಣಮುಖಿ ರಂಗಮಂಟಪದಲ್ಲಿ ದೇಶದ ವಿವಿಧ ಭಾಗದಿಂದ ಬರುವ ಕಲಾ ತಂಡಗಳಿಂದ ಸೇವಾರೂಪವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಉತ್ಸವದ ಪಾರಂಪರಿಕ ಆಚರಣೆಯ ಜೊತೆಗೆ ವಿವಿಧ ಸಾಂಸ್ಕೃತಿಕ ವೈಭವಗಳ ವಿಜೃಂಭಣೆಯ ಆಚರಣೆಗಳು ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಅರ್ಚಕರು, ತಂತ್ರಿಗಳಾದ ಕೆ.ನಿತ್ಯಾನಂದ ಅಡಿಗ, ಸುಧಾ ಕೆ., ಯು. ರಾಜೇಶ್ ಕಾರಂತ, ಮಹಾಲಿಂಗ ನಾಯ್ಕ, ಸುರೇಂದ್ರ ಶೆಟ್ಟಿ, ರಘುರಾಮ ದೇವಾಡಿಗ, ಧನಾಕ್ಷಿ, ಅಭಿಲಾಷ್ ಪಿ. ವಿ, ದೇವಳದ ತಂತ್ರಿಗಳು, ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ದೇವಳದ ಸಿಬ್ಬಂದಿ ವರ್ಗ ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.


















