ವಿಜಯನಗರ : ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮನೆ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಅವರ ಚಿತ್ರ ಕೆತ್ತಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಪಾರ್ವತಿ ತಮ್ಮ 15 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಮನೆ ಬಾಗಿಲು ಅಳವಡಿಕೆ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣದಿಂದಲೇ ಮಾಡಿಸಿರುವ ಬಾಗಿಲ ದ್ವಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಿಂತಿರುವ ಭಾವಚಿತ್ರ ಕೆತ್ತಿಸಿ, ಚಿತ್ರದ ಮೇಲೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಲಕ್ಷ್ಮಿ ಯೋಜನೆ ಎಂದು ಬರೆಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣದಿಂದ ಸಾಕಷ್ಟು ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡಿರುವ ನಿದರ್ಶನಗಳಿವೆ. ಈಗ ಅದೇ ರೀತಿ ಗೃಹಲಕ್ಷ್ಮಿ ಹಣದಿಂದಲೇ ಸಿಎಂಗೆ ವಿನೂತನ ರೀತಿಯಲ್ಲಿ ಈ ಬಡ ಕುಟುಂಬ ಅಭಿನಂದನೆ ಸಲ್ಲಿಸಿದೆ. ಇನ್ನೂ ಸಿದ್ದರಾಮಯ್ಯ ಭಾವಚಿತ್ರವಿರುವ ಮುಖ್ಯದ್ವಾರದ ವೀಕ್ಷಣೆಗೆ ಅಕ್ಕಪಕ್ಕದ ಗ್ರಾಮದವರು ಆಗಮಿಸುತ್ತಿದ್ದಾರೆ.