ಬೆಂಗಳೂರು: ಮದ್ದೂರಿನಲ್ಲಿ ಸರ್ಕಾರದ ಮುಸ್ಲೀಂ ಓಲೈಕೆ ನೀತಿಯಿಂದ ಕಲ್ಲು ತೂರಾಟ ನಡೆದಿದ್ದು, ಸರ್ಕಾರ ಹಿಂದೂ ವಿರೋಧಿ ಆಗಿ ನಡೆದುಕೊಳ್ಳುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ವರದಿಗಾರರೊಂದಿದಗೆ ಮಾತನಾಡಿದ ಛಲವಾದಿ, ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಸಲುವಾಗಿ ಹಿಂದೂಗಳಿಗೆ ತೊಂದರೆ ಮಾಡುತ್ತಿದೆ. ಸರ್ಕಾರ ಒಂದೇ ಕಡೆ ವಾಲಿದ್ದರಿಂದ ಇಂತಹ ಘಟನೆಗಳಿಗೆ ದಾರಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಿಡಿಗೇಡಿಗಳು ಗಣೇಶ ಮರೆವಣಿಗೆ ವೇಳೆ ಕಲ್ಲು ತೂರಿದ್ದಾರೆ. ಗಣಪತಿ ಹಬ್ಬವನ್ನೂ ನಮ್ಮೂರಲ್ಲೇ ಮಾಡಲು ಬಿಡಲ್ಲ ಎಂದರೆ ಹೇಗೆ? ಮದ್ದೂರು ಘಟನೆ ಆದ ಮೇಲೂ ಚಿತ್ರದುರ್ಗದಲ್ಲೂ ನಿರ್ಬಂಧ ಹಾಕಿದ್ದಾರೆ. ಕಾಂಗ್ರೆಸ್ ನ ಓಲೈಕೆ ರಾಜಕೀಯವೇ ಎಲ್ಲದಕ್ಕೂ ಕಾರಣ ಎಂದು ಕಿಡಿಕಾರಿದ್ದಾರೆ. ಬಿಕೆ ಸಂಗಮೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸಂಗಮೇಶ್ ಅವರು ಈ ಜನ್ಮದಲ್ಲಿ ಹಿಂದೂ ಆಗಿ ಹುಟ್ಟಿದ್ದಾರೆ. ಅವರು ಮೊದಲು ಹಿಂದೂ ಧರ್ಮದ ಋಣ ತೀರಿಸಲಿ, ನಂತರ ಮುಸ್ಲಿಂ ಆಗಿ ಹುಟ್ಟುವ ಮಾತಾಡಲಿ. ಮುಂದುವರೆಸಿ ಈ ಜನ್ಮದಲ್ಲೇ ಮುಸ್ಲಿಂ ಆಗಿ ಅವರು ಹುಟ್ಟಬೇಕಿತ್ತು, ಯಾರು ತಡೆದಿದರು? ಈಗಲೇ ಮುಸ್ಲಿಂ ಆಗಬಹುದು ಅವರು, ಇದೆಲ್ಲ ಅವರ ಓಲೈಕೆ, ದ್ವಂದ್ವ ಮಾತುಗಳು ಮುಸ್ಲಿಮರೇ ಅವರ ಮಾತು ನಂಬಲ್ಲ, ಅವರ ಮಾತಲ್ಲಿ ಸತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.



















