ಅಹಮದಾಬಾದ್ : ಇಲ್ಲಿ ನಡೆದ 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿರಾಟ್ ಕೊಹ್ಲಿ ಸಿಡಿಸಿದ ವಿನ್ನಿಂಗ್ ಸಿಕ್ಸರ್ನೊಂದಿಗೆ ತಂಡ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರೆ, ಅತ್ತ ವಿರಾಟ್ ಕೊಹ್ಲಿ ಮಾತ್ರ ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬಳಿ ತೆರಳಿ ಮಾತನಾಡಿದ್ದರು.
ಮೈದಾನದಲ್ಲಿ ನಡೆದಿದ್ದ ಈ ಗಂಭೀರ ಚರ್ಚೆಯ ಮ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದವು. ಇದೀಗ ಆರ್ಸಿಬಿ ಫ್ರಾಂಚೈಸಿಯು ಈ ಮಾತುಕತೆಯ 43 ಸೆಕೆಂಡುಗಳ ಆಡಿಯೋ ಸಹಿತ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ದಂತಕಥೆ ಕೊಹ್ಲಿ ಯುವ ಪ್ರತಿಭೆಗೆ ನೀಡಿದ ಸ್ಫೂರ್ತಿದಾಯಕ ಕಿವಿಮಾತುಗಳು ಬಹಿರಂಗವಾಗಿವೆ.
‘ಏಕ್ ಬಿಹಾರಿ ಸಬ್ ಪೇ ಭಾರಿ’ ಎಂದ ಕೊಹ್ಲಿ
ನೀನು ಇಲ್ಲಿಂದ ಇನ್ನೂ ಎತ್ತರಕ್ಕೆ ಬೆಳೆಯಬೇಕು, ಇದುವರೆಗೆ ನೀನು ಸಾಧಿಸಿರುವುದೆಲ್ಲವೂ ನಿನ್ನ ಕಠಿಣ ಪರಿಶ್ರಮ ಹಾಗೂ ನಿನ್ನ ಮೇಲಿನ ನಂಬಿಕೆಯಿಂದಾಗಿ ಮಾತ್ರ ಒಲಿದಿದೆ ಎಂದು ಕೊಹ್ಲಿ ಯುವ ಆಟಗಾರನಿಗೆ ಹುರಿದುಂಬಿಸಿದ್ದಾರೆ. ಇತರರು ನಿನ್ನ ಬಗ್ಗೆ ಏನು ಮಾತನಾಡುತ್ತಾರೆ ಅಥವಾ ಹೇಗೆ ಹೇಳುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ಹಿರಿಯ ಆಟಗಾರ ಸಲಹೆ ನೀಡಿದ್ದಾರೆ. ಇದೇ ವೇಳೆ ವೈಭವ್ ಅವರ ಬಿಹಾರದ ಮೂಲವನ್ನು ಉಲ್ಲೇಖಿಸಿರುವ ಕೊಹ್ಲಿ, “ಏಕ್ ಬಿಹಾರಿ ಸಬ್ ಪೇ ಭಾರಿ” (ಒಬ್ಬ ಬಿಹಾರಿ ಎಲ್ಲರಿಗೂ ಭಾರಿ) ಎಂದು ಹೇಳುವ ಮೂಲಕ ಯುವ ಆಟಗಾರನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ವಿರಾಟ್ ಅವರ ಈ ಮಾತುಗಳನ್ನು ಕೇಳಿ ಪುಳಕಿತನಾಗಿದ್ದ ವೈಭವ್ ಮೌನವಾಗಿ ತಲೆಯಾಡಿಸುತ್ತಾ ನಿಂತಿದ್ದ ದೃಶ್ಯ ವಿಡಿಯೋದಲ್ಲಿದೆ.
ಆರೆಂಜ್ ಕ್ಯಾಪ್ ಉಡುಗೊರೆ ನೀಡಿದ್ದ ವಿರಾಟ್
ಟೂರ್ನಿಯ ಆರಂಭಿಕ ವಾರಗಳಲ್ಲಿಯೇ ವಿರಾಟ್ ಕೊಹ್ಲಿ ಅವರು ಈ ಯುವ ಎಡಗೈ ಬ್ಯಾಟರ್ಗೆ ತಾವು ಸಹಿ ಮಾಡಿದ ಆರೆಂಜ್ ಕ್ಯಾಪ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಾಗಲೆಲ್ಲಾ ವೈಭವ್ ಆ ನಿರ್ದಿಷ್ಟ ಕ್ಯಾಪ್ ಅನ್ನು ಹೆಮ್ಮೆಯಿಂದ ಧರಿಸುತ್ತಿದ್ದರು. ಆರೆಂಜ್ ಕ್ಯಾಪ್ ಕೇವಲ ಬ್ಯಾಟಿಂಗ್ ಶ್ರೇಷ್ಠತೆಯ ಸಂಕೇತವಾಗಿರದೆ, ಕೊಹ್ಲಿ ನೀಡಿದ್ದ ಗೌರವದ ಲಾಂಛನವಾಗಿ ವೈಭವ್ ಪಾಲಿಗೆ ಮಹತ್ವ ಪಡೆದುಕೊಂಡಿತ್ತು. ಈ ಮೂಲಕ ಇಬ್ಬರ ನಡುವಿನ ಬಾಂಧವ್ಯ ಟೂರ್ನಿಯುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದಿತ್ತು.
ದಾಖಲೆಗಳು ಮತ್ತು ಟೀಂ ಇಂಡಿಯಾ ಪ್ರವೇಶದ ನಿರೀಕ್ಷೆ
ಈ ಬಾರಿಯ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ತೋರಿದ ಪ್ರದರ್ಶನ ಅಸಾಮಾನ್ಯವಾದದ್ದು. ‘ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್’, ‘ಎಮರ್ಜಿಂಗ್ ಪ್ಲೇಯರ್’ ಹಾಗೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವೈಭವ್, ಆಡಿದ 16 ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 237.31ರ ಸ್ಟ್ರೈಕ್ ರೇಟ್ನಲ್ಲಿ 776 ರನ್ ಸಿಡಿಸಿದ್ದಾರೆ. ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಒಂದೇ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ (59) ಸಿಡಿಸಿದ ದಾಖಲೆಯನ್ನು ಮುರಿದು ಬರೋಬ್ಬರಿ 72 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಪ್ಯಾಟ್ ಕಮಿನ್ಸ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ವಿಶ್ವದರ್ಜೆಯ ಬೌಲರ್ಗಳನ್ನು ನಿರ್ದಯವಾಗಿ ದಂಡಿಸಿರುವ ಈ ಯುವ ಬ್ಯಾಟರ್, ಅತಿ ವೇಗವಾಗಿ 1,000 ಐಪಿಎಲ್ ರನ್ ಪೂರೈಸಿದ ಇತಿಹಾಸವನ್ನೂ ನಿರ್ಮಿಸಿದ್ದಾರೆ. ಈ ಸ್ಫೋಟಕ ಪ್ರದರ್ಶನದ ಬೆನ್ನಲ್ಲೇ ರಾಷ್ಟ್ರೀಯ ಆಯ್ಕೆ ಸಮಿತಿಯು ಇವರ ಮೇಲೆ ಕಣ್ಣಿಟ್ಟಿದ್ದು, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ನೇರವಾಗಿ ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಮುಂಬೈ ಟಿ20 ಲೀಗ್ನಲ್ಲೂ ಮುಂದುವರಿದ ಸೂರ್ಯಕುಮಾರ್ ಯಾದವ್ ವೈಫಲ್ಯ!


















