ಪಾಟ್ನಾ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು ಶೇ.85ಕ್ಕೆ ಏರಿಕೆ ಮಾಡುವುದಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.
ಬಿಹಾರದ ಮೋತಿಹಾರಿಯಲ್ಲಿ ನಡೆಯುತ್ತಿರುವ ʼಓಟರ್ ಅಧಿಕಾರ್ ಯಾತ್ರೆʼಯ ಅಂಗವಾಗಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿ ಯಾದವ್, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು ಎಂದು ಹೇಳಿದ್ದಾರೆ.
ಈಗ ಮತ ಕಳ್ಳತನ.. ಮುಂದೆ ಸರ್ಕಾರದ ಕ್ರಮಗಳು ಕ್ರಮೇಣ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಬಹುದು.
ಮೊದಲು, ಅವರು ನಿಮ್ಮ ಮತವನ್ನು, ನಂತರ ನಿಮ್ಮ ಪಡಿತರವನ್ನು, ನಂತರ ನಿಮ್ಮ ಪಿಂಚಣಿಯನ್ನು ಮತ್ತು ಅಂತಿಮವಾಗಿ ನಿಮ್ಮ ಆಸ್ತಿಗಳನ್ನು ಕಸಿದುಕೊಳ್ಳುತ್ತಾರೆ. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ಬದಲಾಯಿಸಲಾಗುತ್ತದೆ ಎಂದಿದ್ದಾರೆ.
“ಮೀಸಲಾತಿ ಕೋಟಾ ಶೇ. 85ಕ್ಕೆ ಏರಿಕೆ !”
ಇದೇ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯಗಳನ್ನು ಹೆಚ್ಚಿಸುವ ತಮ್ಮ ಮೈತ್ರಿಕೂಟದ ಭರವಸೆಯನ್ನು ಪುನರುಚ್ಛರಿಸಿದ ತೇಜಸ್ವಿ ಯಾದವ್, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು ಶೇ.85ಕ್ಕೆ ಏರಿಕೆ ಮಾಡುತ್ತೇವೆ ಎಂದಿದ್ದಲ್ಲದೇ, ಜನರ ಹಕ್ಕುಗಳ ಅಡಿಪಾಯ ಸಂವಿಧಾನ ಎಂದು ಕರೆದ ತೇಜಸ್ವಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿದರೆ ಅಧಿಕಾರದಲ್ಲಿರುವವರನ್ನು ತೆಗೆದುಹಾಕುವಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಅವರು, “ಚಾಚಾ ಸಿಲುಕಿಕೊಂಡಿದ್ದಾರೆ. ಅವರು ಮೊದಲಿನಂತೆ ಇಲ್ಲ. ಅವರು ಇನ್ನು ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ” ಎಂದು ಟೀಕಿಸಿದ್ದಾರೆ.