ವಿಘ್ನನಿವಾರಕ, ಗಜವದನ, ಕರಿಮುಖ, ಪಾರ್ವತಿ ಸುತ..ಹೀಗೆ ನಾನಾ ಹೆಸರುಗಳಿಂದ ಪೂಜಿಸುವ ಗಣೇಶನ ಸ್ತುತಿ ಎಲ್ಲೆಡೆ ಈಗಾಗಲೇ ಆರಂಭವಾಗಿದೆ..ಹೀಗಾಗಿ ಭಕ್ತರು ಎಲ್ಲೆಡೆ ಗಣೇಶನನ್ನು ಸ್ವಾಗತಿಸುತ್ತಿದ್ದಾರೆ. ಈಗ ವಿಷಯ ಏನಪ್ಪ ಅಂದ್ರೆ ಗಣೇಶನಿಗೆ ಗರಿಕೆ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಭಕ್ತಿಯಿಂದ ಹಸಿರಾದ ಗರಿಕೆಯನ್ನು ಗಣೇಶನಿಗೆ ಅರ್ಪಿಸಬೇಕು. ಗಣೇಶನಿಗೆ 21 ಗರಿಕೆಗಳನ್ನು ಅರ್ಪಿಸುವುದು ಮಂಗಳಕರ ಎಂದು ಹಿರಿಯರು ಹೇಳುತ್ತಾರೆ.
ಗಣೇಶನಿಗೆ 21 ಗರಿಕೆ ಅರ್ಪಣೆ ಮಾಡಿದ್ರೆ ವಿಘ್ನಗಳು ದೂರವಾಗುತ್ತದೆ, ಅದೃಷ್ಟವು ಒಲಿದು ಬರುತ್ತದೆ ಎನ್ನುವ ನಂಬಿಕೆಯೂ ಇದೆ. ಹೀಗಾಗಿ ಡೊಳ್ಳು ಹೊಟ್ಟೆ ಗಣಪನಿಗೆ ಸಾಮಾನ್ಯವಾಗಿ ಬೆಸ ಸಂಖ್ಯೆಯಲ್ಲಿ 3, 5, 7 ಅಥವಾ 21ರಂತೆ ಅರ್ಪಿಸಬೇಕು ಎನ್ನಲಾಗುತ್ತದೆ. ಹೆಚ್ಚಿನವರು 21 ಗರಿಕೆಯನ್ನು ಅರ್ಪಿಸುತ್ತಾರೆ. ಇದರಿಂದ ಅದೃಷ್ಟವು ಒಲಿಯುತ್ತದೆ. ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ ಸಂತೋಷ, ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.
ಬೆಸ ಸಂಖ್ಯೆಯೂ ಮಂಗಳಕರವಾದದ್ದು. ಹೀಗಾಗಿ ಗೌರಿ ಪುತ್ರನಿಗೆ ನೈವೇದ್ಯದಿಂದ ಹಿಡಿದು ಗರಿಕೆ ಹೀಗೆ ಏನೇ ಅರ್ಪಿಸುವುದಾದರೂ ಬೆಸ ಸಂಖ್ಯೆಯನ್ನು ಅರ್ಪಿಸಲಾಗುತ್ತದೆ. ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎಂದು ಹಲವರು ನಂಬಿಕೊಂಡು ಬಂದಿರುವ ಸಂಪ್ರದಾಯವಾಗಿದೆ.

















