ವಾಷಿಂಗ್ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಮೆರಿಕ ನೆಲದಿಂದಲೇ ಭಾರತಕ್ಕೆ ನೇರವಾಗಿ ಅಣ್ವಸ್ತ್ರ ಯುದ್ಧದ ಬೆದರಿಕೆ ಹಾಕುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಭಾರತದೊಂದಿಗಿನ ಯುದ್ಧದಲ್ಲಿ “ಅಸ್ತಿತ್ವದ ಅಪಾಯ” ಎದುರಾದರೆ, “ಅರ್ಧ ಜಗತ್ತನ್ನೇ ನಾಶ ಮಾಡುತ್ತೇವೆ” ಎಂದು ಹೇಳಿದ್ದಾರೆ.
“ನಾವು ಅಣ್ವಸ್ತ್ರ ರಾಷ್ಟ್ರ. ನಾವು ನಾಶವಾಗುತ್ತಿದ್ದೇವೆ ಎಂದು ನಮಗೆ ಅನಿಸಿದರೆ, ನಾವು ಅರ್ಧ ಜಗತ್ತನ್ನು ನಮ್ಮೊಂದಿಗೆ ನಾಶ ಮಾಡುತ್ತೇವೆ” ಎಂದು ಮುನೀರ್ ಹೇಳಿದ್ದಾರೆ. ದೇಶವೊಂದರ ಸೇನಾ ಮುಖ್ಯಸ್ಥರು ಮತ್ತೊಂದು ದೇಶದ ವಿರುದ್ಧ ಅಮೆರಿಕದ ನೆಲದಿಂದ ಇಂತಹ ಅಣ್ವಸ್ತ್ರ ಬೆದರಿಕೆ ಹೊರಡಿಸಿರುವುದು ಇದೇ ಮೊದಲು ಎಂದು ವರದಿಗಳು ಹೇಳಿವೆ.
ಜ.ಮುನೀರ್ ಅವರು ಸಿಂಧೂ ನದಿ ನೀರಿನ ಒಪ್ಪಂದದ ವಿಚಾರದಲ್ಲೂ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿಂಧೂ ನದಿಯ ಹರಿವನ್ನು ತಡೆಯುವ ಯಾವುದೇ ಮೂಲಸೌಕರ್ಯವನ್ನು ಭಾರತ ನಿರ್ಮಿಸಿದರೆ, ಅದನ್ನು ನಾವು ನಾಶಪಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೇ “ನಮ್ಮಲ್ಲೇನೂ ಕ್ಷಿಪಣಿಗಳ ಕೊರತೆ ಇಲ್ಲ” ಎಂದಿದ್ದಾರೆ.
“ಭಾರತವು ಅಣೆಕಟ್ಟು ನಿರ್ಮಿಸಲು ನಾವು ಕಾಯುತ್ತೇವೆ, ಅದು ನಿರ್ಮಿಸಿದಾಗ, ನಾವು ಅದನ್ನು 10 ಕ್ಷಿಪಣಿಗಳೊಂದಿಗೆ ನಾಶ ಮಾಡುತ್ತೇವೆ. ಸಿಂಧೂ ನದಿ ಭಾರತೀಯರ ಆಸ್ತಿಯಲ್ಲ. ಹಮೇಂ ಮಿಸೈಲೋನ್ ಕಿ ಕಮಿ ನಹೀ ಹೈ, ಅಲ್-ಹಮ್ದುಲಿಲ್ಲಾಹ್ (ನಮಗೆ ಕ್ಷಿಪಣಿಗಳ ಕೊರತೆ ಇಲ್ಲ, ದೇವರಿಗೆ ಸ್ತುತಿ)” ಎಂದು ಮುನೀರ್ ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಭಾರತ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ, ತನಗಾದ ನಷ್ಟವನ್ನು ಭಾರತ ಏಕೆ ಬಹಿರಂಗಪಡಿಸಿಲ್ಲ ಎಂದು ಮುನೀರ್ ಪ್ರಶ್ನಿಸಿದ್ದಾರೆ. “ಭಾರತೀಯರು ತಮ್ಮ ನಷ್ಟವನ್ನು ಒಪ್ಪಿಕೊಳ್ಳಬೇಕು. ಸ್ಪೋರ್ಟ್ಸ್ಮನ್ ಸ್ಪಿರಿಟ್ ಒಂದು ಸದ್ಗುಣ. ನಾವೂ ನಮಗಾದ ನಷ್ಟವನ್ನು ಬಹಿರಂಗಪಡಿಸುತ್ತೇವೆ, ಆದರೆ ಭಾರತ ಹಾಗೆ ಮಾಡಿದರೆ ಮಾತ್ರ” ಎಂದು ತಿಳಿಸಿದ್ದಾರೆ
ಇದೇ ವೇಳೆ, ನಾವು ಮುಂದಿನ ಬಾರಿ ಭಾರತದ ಪೂರ್ವ ಭಾಗದಲ್ಲಿರುವ “ಅತ್ಯಂತ ಮೌಲ್ಯಯುತ ಸಂಪನ್ಮೂಲಗಳಿಂದ” ದಾಳಿ ಆರಂಭಿಸಿ, ನಂತರ ಪಶ್ಚಿಮಕ್ಕೆ ಸಾಗುತ್ತೇವೆ ಎಂದು ಮುನೀರ್ ಹೇಳಿದ್ದಾರೆ.



















