ಮಂಡ್ಯ: ಬಡ ಕುಟುಂಬಯೊಂದು ಹೆತ್ತ ಮಗುವನ್ನು ಆರೈಕೆ ಮಾಡಲಾಗದೆ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ ಕರುಣಾಜನಕ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ನಿನ್ನೆ (ಗುರುವಾರ) ಆಸ್ಪತ್ರೆಯಲ್ಲಿ ಬಡ ಕುಟುಂಬದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹುಟ್ಟಿದ ತಕ್ಷಣವೇ ಈ ಮಗುವನ್ನು ಸಾಕಲು ನಮಗೆ ಶಕ್ತಿ ಇಲ್ಲ. ಯಾರಿಗಾದರು ಕೊಟ್ಟುಬಿಡಿ ಎಂದು ತಂದೆ ತಾಯಿ ಇಬ್ಬರು ವೈದ್ಯರನ್ನು ಕೇಳಿಕೊಂಡಿದ್ದಾರೆ.
ಹೆತ್ತ ತಾಯಿ ತಂದೆಯ ನಿರ್ಧಾರ ಕಂಡು ಆಸ್ಪತ್ರೆ ವೈದ್ಯರು ಒಂದು ಕ್ಷಣ ಬೆಚ್ಚಿಬಿದ್ದಿರು. ತಕ್ಷಣವೇ ಈ ವಿಷಯವನ್ನು ಆಸ್ಪತ್ರೆಯ ಮೇಲಧಿಕಾರಿಗಳಿಗೆ ತಿಳಿಸಿ, ಆಸ್ಪತ್ರೆಯ ಹಿರಿಯ ವೈದ್ಯರು ಸೇರಿ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೆತ್ತ ತಂದೆ ತಾಯಿಯರನ್ನು ಮನವೊಲಿಕೆ ಮಾಡಲು ಯತ್ನಿಸಿದ್ದಾರೆ.
ಆದರೆ ಎಷ್ಟೆ ಮನವೊಲಿಸಿದರು ತಂದೆ ತಾಯಿ ನಿರ್ಧಾರ ಬದಲಾಗದ ಬಳಿಕ ಮಗುವನ್ನು ಸಾಂತ್ವನ ಆರೈಕೆ ಕೇಂದ್ರಕ್ಕೆ ಕಳಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದು, ಹೆತ್ತ ತಾಯಿ ತಂದೆ ಅನುಮತಿ ಮೇರೆಗೆ ಮಗುವನ್ನು ಆರೈಕೆ ಕೇಂದ್ರಕ್ಕೆ ಕಳಿಸಿಕೊಟ್ಟರು. ಕುಟುಂಬದ ಕಡು ಬಡತನವೇ ಈ ಮಗುವಿನ ಹೆತ್ತ ತಾಯಿ ತಂದೆಯ ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸೇರಿ ಶಿಶು ಅಭಿವೃದ್ದಿಯಿಂದ ಮಗುವಿನ ಆರೈಕೆಗೆ ಸಾಂತ್ವನಕ್ಕೆ ನೆರವು ನೀಡಲಾಗಿದೆ.



















