ಕುಂದಾಪುರ : ಬ್ರಾಹ್ಮಣರಲ್ಲಿ ಇರುವ ಸದ್ಗುಣಗಳು ಮತ್ತು ಪ್ರತಿಭೆ ಆಧಾರದ ಮೇಲೆಯೇ ಜೀವನವನ್ನು ತಾತ್ವಿಕತೆಯೊಂದಿಗೆ ನಡೆಸಬೇಕು. ವೇದ ಮತ್ತು ಉಪನಿಷತ್ ಗಳಲ್ಲಿ ಇರುವ ತತ್ವಗಳಂತೆ ನಾವೆಲ್ಲ ಸಮಾಜದಲ್ಲಿ ಮಾದರಿಯಾಗಿ ಬೆಳೆಯಬೇಕು. ಇನ್ನು ಕೂಡ ಬಡ ಮತ್ತು ದುರ್ಬಲ ಬ್ರಾಹ್ಮಣ ಕುಟುಂಬಗಳು ನಮ್ಮ ನಡುವೆ ಇದ್ದಾರೆ ಅವರಿಗೆ ಸಂಘಟನೆಗಳು ಸಹಾಯ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ ವಾಸುದೇವ ಕಾರಂತ್ ಹೇಳಿದರು.
ಅವರು, ಶ್ರೀ ಗುರುನರಸಿಂಹ ಸಭಾಭವನ ಕಿರಿಮಂಜೇಶ್ವರದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು (ರಿ.) ಉಪ್ಪುಂದ ಇವರ ಆಯೋಜಿಸಿದ ಶ್ರಾವಣ ಸಂಧ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿಪ್ರಾಯ ಪಟ್ಟರು.
ಉಪ್ಪುಂದ ವಲಯ ಅಧ್ಯಕ್ಷ ಸಂದೇಶ್ ಭಟ್ ಅವರು ಮಾತನಾಡಿ, ಬ್ರಾಹ್ಮಣತ್ವ ಎನ್ನುವುದು ಜಾತಿಯಲ್ಲ, ಅರ್ಹತೆ. ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ಇಲ್ಲಿ ಹರಿದು ಬರಲಿ ಎನ್ನುವಂತಹ ರಕ್ತ ನಮ್ಮದು. ಯಾರಿಗೆ ತನ್ನ ಬದುಕಿನ ಸೀಮಿತತೆಯನ್ನು ಮೀರಿ ಯೋಚನೆ ಮಾಡುವ ಅರ್ಹತೆ ಇದೆಯೋ ಅವನು ಬ್ರಾಹ್ಮಣನಾಗಬಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು.
ವಿದ್ವಾನ್ ಮಂಜುನಾಥ್ ಭಟ್ ಹರೇಗೋಡು ಧಾರ್ಮಿಕ ಪ್ರವಚನ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಟೆ, ನೃತ್ಯ ವೈಭವ, ಗೀತ ಗಾಯನ, ಭರತನಾಟ್ಯ, ಶ್ಲೋಕ ಪಠಣ, ಆಶು ನಟನೆ, ಯಕ್ಷ ನೃತ್ಯ ಸೇರಿ ಇತರೆ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗಣೇಶ್ ರಾವ್, ತಾಲೂಕು ಉಪಾಧ್ಯಕ್ಷ ಗಣೇಶ್ ಮಯ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ವೀಣಾ ಹೆಬ್ಬಾರ್, ಗೌರವಾಧ್ಯಕ್ಷ ಕೆ. ಅರುಣ್, ಕೋಶಾಧಿಕಾರಿ ಯೋಗೀಶ್, ಯುವ ವೇದಿಕೆಯ ಅಧ್ಯಕ್ಷ ಪದ್ಮನಾಭ ಹೆಬ್ಬಾರ್ ಸೇರಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಡಿ.ಟಿ ಸೀತಾರಾಮ ಮಯ್ಯ ಸ್ವಾಗತಿಸಿದರು, ಪ್ರಶಾಂತ್ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.




















