ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಈ ಹಿಂದೆ ತೀವ್ರ ಚರ್ಚಗೆ ಕಾರಣವಾಗಿದ್ದ ಕಾಂಗ್ರೆಸ್ ಪಾಳಯದ ʼದಲಿತ ಮುಖಂಡರ ಸಭೆʼ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಬಾರಿಯೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲೇ ಸಭೆ ನಡೆಯಲಿದ್ದು, ಆ.02ರಂದು ದಲಿತ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಟ್ಟು ಸೇರಿ ಚರ್ಚಿಸಲಿದ್ದಾರೆ. ಮೇಲ್ನೋಟಕ್ಕೆ ಇದು ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಸಭೆಯಾಗಿದ್ದರೂ ಹಲವು ರಾಜಕೀಯ ವಿಷಯಗಳು ಚರ್ಚೆಗೆ ಬರಲಿವೆ ಎಂದು ಹೇಳಲಾಗಿದೆ.
ಈ ಹಿಂದೆ ಡಾ. ಜಿ. ಪರಮೇಶ್ವರ್, ದಲಿತ ಮುಖಂಡರ ಔತಣ ಕೂಟ ಏರ್ಪಡಿಸಿದ್ದು, ರಾಜ್ಯ ರಾಜಕಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕೊನೆಯಲ್ಲಿ ಸ್ವತಃ ವರಿಷ್ಠರೇ ಇದಕ್ಕೆ ಬ್ರೇಕ್ ಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ನಲ್ಲಿ ಇರುವ ದಲಿತ ನಾಯಕರು ಅಲ್ಲದೆ, ವಿವಿಧ ದಲಿತ ಸಂಘಟನೆಗಳ ಮುಖಂಡರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಸಭೆಗೂ ಮುನ್ನ ಹೊಸ ವರ್ಷಾಚರಣೆ ನೆಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಏರ್ಪಡಿಸಿದ್ದ ʼಔತಣಕೂಟʼ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಈ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಾ. ಜಿ. ಪರಮೇಶ್ವರ್, ʼಆ.02ರಂದು ನಮ್ಮ ಸಚಿವ, ಶಾಸಕರ ಸಭೆ ಕರೆದಿದ್ದೇನೆ. ನಾನು ನಮ್ಮವರ ಸಭೆ ಕರೆದಿದ್ದೇನೆ. ಒಳ ಮೀಸಲಾತಿ ಸಂಬಂಧ ವರದಿ ಕೊಡಲಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕು ? ನಾವೇನು ಸ್ಪಷ್ಟತೆ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚಿಸುತ್ತೇವೆ ಎಂದಿದ್ದಾರೆ.


















