ಹುಬ್ಬಳ್ಳಿ: ಹುಬ್ಬಳ್ಳಿ ಕೇಶ್ವಾಪುರದಲ್ಲಿ ಇರುವ ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆಯ ಆಗರವೇ ಕಂಡುಬಂದಿದೆ. ಈ ಮೂಲಕ ಭವಿಷ್ಯದ ಕೇಂದ್ರ ಸರ್ಕಾರಿ ನೌಕರರ ಜೊತೆಗೆ ಪರೀಕ್ಷಾ ಕೇಂದ್ರ ಸಿಬ್ಬಂದಿ ಹುಡುಗಾಟವಾಡಿರುವ ಘಟನೆ ಕಂಡುಬಂದಿದೆ.
ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಬೇಕಿದ್ದ ಎಸ್ಎಸ್ಸಿ ಪರೀಕ್ಷೆಯನ್ನು ರಾತ್ರಿ ಹತ್ತು ಗಂಟೆಯಾದರೂ ಆರಂಭ ಮಾಡದೇ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಪರೀಕ್ಷೆಗಾಗಿ ಆಗಮಿಸಿದ್ದರು. ಆದರೆ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ರಾತ್ರಿ ಹತ್ತು ಗಂಟೆಯಾದರೂ ಆರಂಭವಾಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಆನ್ಲೈನ್ ಪರೀಕ್ಷೆಗೆ ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ವಿದ್ಯುತ್ ಮತ್ತು ಸರ್ವರ್ಗೆ ಸರಿಯಾದ ವ್ಯವಸ್ಥೆಯಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸದೇ ನೂರಾರು ಅಭ್ಯರ್ಥಿಗಳು ಪರದಾಡುವಂತಾಗಿದೆ.
ಅಭ್ಯರ್ಥಿಗಳ ಸಮಸ್ಯೆಗಳನ್ನು ಕೇಳಲು ಯಾವುದೇ ಅಧಿಕಾರಿಗಳು ಸಹ ಇಲ್ಲ. ಇದರಿಂದ ಸಿಟ್ಟಿಗೆದ್ದು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ದಾರೆ.



















