ಚಾಮರಾಜನಗರ : ಭೀಮನ ಅಮವಾಸ್ಯೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ.
ರಾತ್ರಿಯಿಂದಲೇ ಸಾವಿರಾರು ಭಕ್ತರು ಬೆಟ್ಟದಲ್ಲಿ ಬೀಡು ಬಿಟ್ಟಿದ್ದು, ಬೆಟ್ಟದೆಲ್ಲೆಡೆ ʼಉಘೇ ಉಘೇ ಮಾದಪ್ಪʼ ಎಂಬ ಝೇಂಕಾರ ಹಾಕುವುದರ ಮೂಲಕ ತಮ್ಮ ಭಕ್ತಿ ತೋರ್ಪಡಿಸಿದ್ದಾರೆ.
ನಿನ್ನೆ ರಾತ್ರಿ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಮಾಡಲಾಗಿತ್ತು, ಇಂದು ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಗಿದೆ. ಗರ್ಭಗುಡಿಯನ್ನು ಹೂ, ಹಣ್ಣು ಹಾಗೂ ವಿಶೇಷವಾಗಿ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತ ಮಾಡಲಾಗಿದೆ.ಭಕ್ತರಿಗಾಗಿ ಮಲೆ ಮಹದೇಶ್ವರ ಪ್ರಾಧಿಕಾರವು ಎರಡು ಲಕ್ಷ ಲಾಡು ತಯಾರಿಸಿದ್ದು, ದರ್ಶನ ಸೇವೆ ನೀಡಿದ ಬಳಿಕ ಪ್ರಸಾದವಾಗಿ ಲಾಡನ್ನು ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.



















