ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಪ್ರಸಿದ್ಧ ದೇವಾಲಯ ಮುರುಡೇಶ್ವರದಲ್ಲಿ ಇದೀಗ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಹೀಗಾಗಿ ಭೇಟಿ ನೀಡುವ ಭಕ್ತಾಧಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕೆಂದು ಆಡಳಿತ ಮಂಡಳಿ ಸೂಚನೆ ನೀಡಿದೆ.
ಹೊಸ ವಸ್ತ್ರ ಸಂಹಿತೆಯ ಪ್ರಕಾರ ಪುರುಷರು ಕುರ್ತಾ -ಪೈಜಾಮ, ಪ್ಯಾಂಟ್- ಶರ್ಟ್, ಧೋತಿ, ಮಹಿಳೆಯರು ಸೀರೆ, ಸಾಲ್ವಾರ್, ಚೂಡಿದಾರ್ ಧರಿಸಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಬಹುದೆಂದು ತಿಳಿಸಲಾಗಿದೆ.
ದೇವಾಲಯಕ್ಕೆ ಪಾಶ್ಚಿಮಾತ್ಯ ಶೈಲಿಯ ಕ್ಯಾಶುವಲ್ ಡ್ರೆಸ್ ಗಳು, ಬನಿಯಾನ್, ಜೀನ್ಸ್ ಪ್ಯಾಂಟ್, ಶಾರ್ಟ್ಸ್, ಟೀ ಶರ್ಟ್ಸ್, ಹಾಫ್ ಸ್ಲೀವ್ ಡ್ರೆಸ್ ಹಾಕಿಕೊಂಡು ಬಾರದಂತೆ ದೇವಸ್ಥಾನದ ಹೊರ ಭಾಗದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಈ ನಡುವೆ ಭಕ್ತಾದಿಗಳು ಮನಬಂದಂತೆ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದನ್ನು ಗಮನಿಸಿದ ಆಡಳಿತ ಮಂಡಳಿ, ಹಿಂದೂ ಪರ ಸಂಘಟನೆಗಳ ಮನವಿಯ ಮೇರಗೆ ವಸ್ತ್ರ ಸಂಹಿತೆ ಜಾರಿ ಮಾಡಿದೆ.