ಸರಿಸುಮಾರು ಮೂರು ದಶಕಗಳೇ ಉರುಳಿ ಹೋಗಿವೆ. ರಾಜ್ಯದಲ್ಲಿ ಅತ್ಯಂತ ಸುಭದ್ರ ತಳಪದಿಯ ಮೇಲೆ ಅಸ್ತಿತ್ವ ಕಟ್ಟಿಕೊಂಡಿದ್ದ ಜನತಾ ಪರಿವಾರ ಮುಂದೆ ತನ್ನ ಆತಂರಿಕ ಕಲಹದಿಂದಲೇ ಛಿದ್ರವಾಗಿದ್ದು ಇತಿಹಾಸ. 1994ರಲ್ಲಿ ಹೆಚ್.ಡಿ ದೇವೇಗೌಡ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ಜನತಾ ಪರಿವಾರದ ಆಡಳಿತದ ಕನಸನ್ನು ನನಸು ಮಾಡಿದರು. ರಾಮಕೃಷ್ಣ ಹೆಗಡೆ ಬಳಿಕ ಸುಭದ್ರ ಸರ್ಕಾರ ನೀಡುವ ಜನತಾ ಕುಟುಂಬದ ಕನಸಿಗೆ ನೀರೆರೆದವರು ಹೆಚ್ ಡಿ ದೇವೇಗೌಡ. ಅಷ್ಟೇ ಮುಂದಾಗಿದ್ದೆಲ್ಲವೂ ಇಂದಿಗೆ ಇತಿಹಾಸ. ದೇವೇಗೌಡರು ದೇಶದ ಪ್ರಧಾನಿ ಹುದ್ದೆಗೇರಿದ್ದರೆ ಇತ್ತ ಜೆ.ಹೆಚ್. ಪಟೇಲರು ರಾಜ್ಯದ ಚುಕ್ಕಾಣಿ ಹಿಡಿದರು. ಅಷ್ಟೇ ಅಲ್ಲ ಕಾಂಗ್ರೆಸ್ ಹಿನ್ನೆಲೆಯಿಲ್ಲದ ಓರ್ವ ನಾಯಕ ರಾಜ್ಯದ ಸಿಎಂ ಆಗಿದ್ದು ಕೂಡ ಐತಿಹ್ಯ. ಅಲ್ಲಿಗೀಗ ಬರೋಬ್ಬರಿ 30 ವರ್ಷಗಳು ಕಳೆದು ಹೋಗಿವೆ. ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಸಿಂಹಾಸನವನ್ನು ಏರಬೇಕೆಂಬ ಜನತಾ ಪರಿವಾರದ ಕನಸು ಇಂದಿಗೂ ನನಸಾಗಿಲ್ಲ. ಆದರೀಗ ಕಾಲ ಬದಲಾಗಿದೆ. ಮುಂಬರುವ ಚುನಾವಣೆಗೆ ಹೊಸ ಹುಮ್ಮಸ್ಸಿನಲ್ಲಿ ನಾಡಿನ ಜನತೆ ಮುಂದೆ ಹೋಗಲು ಜೆಡಿಎಸ್ ತನ್ನ ಮೂರನೇ ತಲೆಮಾರಿನ ನಾಯಕನಿಗೆ ಅಧಿಕಾರ ಹಸ್ತಾಂತರಿಸುವ ಮನ್ವಂತರದ ಕಾಲಘಟ್ಟಕ್ಕೆ ಬಂದು ತಲುಪಿದೆ.
ಅಜ್ಜ-ಅಪ್ಪನ ಬಳಿಕವೀಗ ನಿಖಿಲ್ ಕುಮಾರಸ್ವಾಮಿ ಸರದಿ
ರಾಜ್ಯಾದ್ಯಂತ ಪ್ರವಾಸ, ಗೆಲ್ತಾರಾ ಯುವ ಮನಸ್ಸು
ಜನತಾ ಪರಿವಾರ ಇಬ್ಬಾಗವಾದಾಗ ಅತಿರಥ ನಾಯಕರೆಲ್ಲಾ ದೇವೇಗೌಡರ ಸಂಗ ತೊರೆದು ಕಾಂಗ್ರೆಸ್ ಗೆ ನೆಗೆದುಬಿಟ್ರು. ಸಿದ್ದರಾಮಯ್ಯ, ಎಂಪಿ ಪ್ರಕಾಶ್ ರಂಥಾ ವರ್ಚಸ್ವೀ ನಾಯಕರೇ ಪಕ್ಷ ಬಿಟ್ಟ ಪರಿಣಾಮ ಜೆಡಿಎಸ್ ರಾಜ್ಯದಲ್ಲಿ ಕಾಲಾನುಕ್ರಮದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಇಂದಿಗೂ ಹೆಣಗುತ್ತಿದೆ. ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಹೀಗೆ ದೋಸ್ತಿ ಆಟಕ್ಕೆ ಸೀಮಿತವಾಗಿರೋ ದಳಪತಿಗಳು ಇದೀಗ ಸ್ವಂತ ಬಲದ ಮೇಲೆ ಚುಕ್ಕಾಣಿ ಹಿಡಿಯೋ ಹೆಬ್ಬಯಕೆಯಲ್ಲಿದೆ ಆದ್ರೆ ಈ ಬಾರಿ ವಿಶೇಷ ಎನ್ನುವಂತೆ ಈ ಹೊಣೆಗಾರಿಕೆಯನ್ನು ಪಕ್ಷದ ಯುವ ನಾಯಕ, ನಿಖಿಲ್ ಕುಮಾರಸ್ವಾಮಿ ಹೆಗಲಿಗೇರಿಸಲಾಗಿದೆ.
60 ದಿನಗಳ ರಾಜ್ಯ ಸಂಚಾರಕ್ಕೆ ಓಂಕಾರ
ಸಿದ್ದಗಂಗಾ ಶ್ರೀಗಳ ಸನ್ನಿಧಿಯಿಂದ ಹೆಜ್ಜೆ
ಪಕ್ಷದ ಬಲವರ್ಧನೆಯ ನೊಗ ಹೊತ್ತಿರುವ ನಿಖಿಲ್ ಕುಮಾರಸ್ವಾಮಿ ಅದರ ಮೊದರಲ ಚರಣ ಎನ್ನುವಂತೀಗ ಮಿಸ್ಡ್ ಕಾಲ್ ಅಭಿಯಾನ ಆರಂಭಿಸಿದ್ದಾರೆ. ಪಕ್ಷಕ್ಕೆ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಶುರುವಾಗಿರುವ ಈ ಅಭಿಯಾನ 60 ದಿನಗಳ ಕಾಲ ರಾಜ್ಯದ್ಯಂತ ಸಂಚರಿಸಲಿದೆ. ಹಾಗಂತಾ ನಿಜಕ್ಕೂ ಇದು ನಿಖಿಲ್ ಪಾಲಿಗೂ ಅಸ್ತಿತ್ವದ ಪ್ರಶ್ನೆಯಾಗಿದ್ದು, ಜನಮಾನಸದಲ್ಲಿ ತಮ್ಮ ಛಾಪು ಮೂಡಿಸುವ ದೊಡ್ಡ ವೇದಿಕೆಯಾಗಿ ಪರಿವರ್ತನೆಯಾಗಿದೆ.
ನಿಖಿಲ್ ಮುಂದಿರುವ ಸವಾಲುಗಳಾದ್ರು ಏನು
ನಾಡಿನ ಜನರ ದಿಲ್ ಗೆಲ್ಲಲು ಹೇಗಿದೆ ರಣತಂತ್ರ
ಜೆಡಿಎಸ್ ಅಂದ್ರೆ ಒಕ್ಕಲಿಗರ ಪಕ್ಷ ಅನ್ನುವ ಹಣೆಪಟ್ಟಿ ಅಂಟಿಬಿಟ್ಟಿದೆ. ಅದರಲ್ಲೂ ಹಳೇ ಮೈಸೂರಿಗೆ ಮಾತ್ರ ಸೀಮಿತವಾದ ಪಾರ್ಟಿ ಎಂಬ ಆರೋಪವೂ ಇದೆ. ಇದಕ್ಕೆ ಮೂಲ ಕಾರಣ ಪಕ್ಷದಲ್ಲಿ ಉತ್ತರ ಕರ್ನಾಟಕದ ಯಾವೊಬ್ಬ ಪ್ರಭಾವಿ ನಾಯಕರಿಲ್ಲದಿರುವುದು. ಕೇವಲ ದೇವೇಗೌಡರು, ಕುಮಾರಸ್ವಾಮಿ ವರ್ಚಸ್ಸನ್ನೇ ನಂಬಿ ಕನಿಷ್ಠ ಸೀಟುಗಳನ್ನು ಗೆಲ್ಲತ್ತಾ ಬರುತ್ತಿರುವುದು. ಹೀಗಾಗಿ ಪಕ್ಷಕ್ಕೀಗ ಓರ್ವ ಮಾಸ್ ಲೀಡರ್ ನ ಅಗತ್ಯವಿದೆ. ರಾಜ್ಯಕ್ಕೂ ಒಬ್ಬ ಯುವ ಮುಖಂಡನ ಅನಿವಾರ್ಯತೆ ಇದೆ. ಇದನ್ನೇ ದಾಳವಾಗಿಸಿ ದಳಪತಿಗಳೀಗ ನಿಖಿಲ್ ರನ್ನು ಅಖಾಡಕ್ಕೆ ಇಳಿಸಿದೆ. ಉತ್ತರದಿಂದ ದಕ್ಷಿಣದವರೆಗೂ ನಿಖಿಲ್ ಸಂಚರಿಸಿದರೆ ಒಂದು ವೈಬ್ ಕ್ರಿಯೇಟ್ ಆಗಲಿ ಅನ್ನೋದು ಲೆಕ್ಕಾಚಾರ. ಹಾಗಂತಾ ಅದು ಅಷ್ಟು ಸುಲಭದ್ದು ಅಲ್ಲ ಕೂಡಾ. ಈಗಾಗಲೇ ಮೂರು ಚುನಾವಣೆಗಳಲ್ಲಿ ಸೋತಿರುವ ನಿಖಿಲ್, ಇಲ್ಲಿಯವರೆಗೂ ಸಕ್ರಿಯ ರಾಜಕಾರಣದಲ್ಲಿ ಪ್ರಜ್ವಲಿಸಿದವರಲ್ಲ. ಆದರೆ ಅವರಿಗಿನ್ನೂ ಕೇವಲ 37 ವರ್ಷ ಈಗಷ್ಟೇ ಅನುಭವ ಪಕ್ವವಾಗುವ ಸಮಯ. ಇದನ್ನೇ ಅಸ್ತ್ರವಾಗಿಸಿ ಉತ್ತರ, ದಕ್ಷಿಣದ ಯುವಕರನ್ನು ನಿಖಿಲ್ ಮೋಡಿ ಮಾಡಿದ್ರೆ ನೆಳೆ ಕಳೆದುಕೊಂಡಿರೋ ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲೂ ಪಕ್ಷ ಮುಂದೆ ಯುದ್ಧ ಗೆಲ್ಲಬಹುದು ಎಂಬ ಗಣಿತವಿದೆ. ಅಷ್ಟೇ ಅಲ್ಲಾ ಈ ಪ್ರವಾಸದ ಫಲ ಆಧರಿಸಿ ಅವರಿಗೆ ಜಿಡಿಎಸ್ ರಾಜ್ಯಾಧ್ಯಕ್ಷಗಿರಿಯನ್ನು ಧಾರೆಂ ಎರೆಯುವ ತಯಾರಿ ನಡೆದಿದೆ. ಹಾಗಂತಾ ನಿಜಕ್ಕೂ ಈ ಸವಾಲು ಸುಲಭದ್ದಲ್ಲ. ಯುವ ಮನಸ್ಸಗಳನ್ನು ಮೋಡಿ ಮಾಡಲು ನಿಖಿಲ್ ದೊಡ್ಡ ಕರಾಮತ್ತು ಮಾಡಬೇಕಿದೆ. ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ. ಮತದಾರರಲ್ಲಿ ಹೊಸ ನಂಬಿಕೆ ಮೂಡಿಸಬೇಕಿದೆ. ಇದು ಸಣ್ಣ ಸಮಯದಲ್ಲಿ ಆಗೋ ಬದಲಾವಣೆ ಅಲ್ಲ. ಆದ್ರೆ ಪ್ರಯತ್ನ ಈಗಷ್ಟೇ ಆರಂಭವಾಗಿದ್ದು, ನಿಖಿಲ್ ಸಾಗಬೇಕಿರುವ ಹಾದಿ ಬಲು ದೂರದಲ್ಲಿದೆ. ಈ ನಿಟ್ಟಿನಲ್ಲಿ, ಅಜ್ಜ, ಅಪ್ಪನಿಂದ ಬಂದ ರಾಜಕೀಯ ಕಲಿಕೆಯನ್ನು ನಿಖಿಲ್ ಸಕಾರಾತ್ಮವಾಗಿ ಕಾರ್ಯರೂಪಕ್ಕೆ ತಂದ್ರೆ ಯಾವುದೂ ಕಷ್ಟವಲ್ಲ.