ಮಹಾರಾಷ್ಟ್ರದ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಇಂದ್ರಯಾಣಿಗೆ ತನ್ನದೇ ಆದ ಸ್ಥಾನವಿದೆ. ಲೋನಾವಾಲದ ಸಹ್ಯಾದ್ರಿ ಬೆಟ್ಟದ ಈ ಗಿರಿಧಾಮ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೆ. ಇಂತಹ ಪ್ರಕೃತಿಯ ಅಪರೂಪದ ಸೌಂದರ್ಯದ ತಾಣದಲ್ಲಿ ನಿನ್ನೆ ನಡೆಯಬಾರದ ಘಟನೆ ನಡೆದು ಹೋಗಿದೆ. ಇಲ್ಲಿನ ಮಾವಲ್ ತಾಲೂಕಿನ ಇಂದ್ರಯಾಣಿ ನದಿಗೆ ಅಡ್ಡಲಾಗಿರುವ ಸೇತುವೆ ಕುಸಿದಿದೆ. ಪರಿಣಾಮ ನಾಲ್ವರು ಪ್ರವಾಸಿಗರು ಸಾವನಪ್ಪಿದ್ದಾರೆ.
30 ವರ್ಷಗಳ ಹಳೆಯ ಸೇತುವೆ ಕುಸಿತ
ನೂರಾರು ಮಂದಿ ಪ್ರವಾಸಿಗರು ನೀರುಪಾಲು
ಈ ಬಾರಿ ಮಹಾರಾಷ್ಟ್ರದಲ್ಲಿ ಉತ್ತಮ ಮುಂಗಾರು ಆಗಮನವಾಗಿದೆ. ಹೇಳಿ ಕೇಳಿ ಗಿರಿಧಾಮ ಬೇರೆ. ನಿರಂತರ ಮಳೆಗೆ ಹಚ್ಚ ಹಸಿರನ್ನೇ ಹೊದ್ದು ಮಲಗಿದ್ದ ಮಾವಲ್ ಪ್ರದೇಶ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅದರಲ್ಲೂ ಇಲ್ಲಿನ ಇಂದ್ರಯಾಣಿ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ನೂರಾರು ಪ್ರವಾಸಿಗರು ಜಮಾಯಿಸಿದ್ದಾರೆ. 30 ವರ್ಷ ಹಳೆಯದಾದ ಇಂದ್ರಯಾಣಿ ಸೇತುವೆ ಮೇಲೆ ಸಾಮರ್ಥ ಮೀರಿ ಜನ ಜಮಾವಣೆಯಾಗಿದ್ದಾರೆ. ಅಷ್ಟೇ, ನೋಡ ನೋಡುತ್ತಿದ್ದಂತೆ ಸೇತುವೆ ನೀರಿಗುರುಳಿದೆ. ನೂರಾರು ಪ್ರವಾಸಿಗರು ಬೋರ್ಗರೆಯೋ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪರಿಣಾಮ ನಾಲ್ವರು ಸಾವನಪ್ಪಿದ್ರೆ, 32 ಮಂದಿ ಗಾಯಗೊಂಡಿದ್ದಾರೆ.
ಅತಿಯಾದ ಭಾರ ಸಹಿಸದೆ ಸೇತುವೆ ಧರಾಶಾಹಿ
ಘಟನಾ ಸ್ಥಳದಲ್ಲಿ ಎನ್ ಡಿಆರ್ ಎಫ್ ಕಾರ್ಯಾಚರಣೆ
30 ವರ್ಷಗಳಷ್ಟು ಹಳೆಯದಾದ ಸೇತುವೆ, ಇದೀಗ ಸಂಪೂರ್ಣ ಧರಾಶಾಹಿಯಾಗಿದೆ. ಅಷ್ಟಕ್ಕೂ ಈ ಸೇತುವೆ ಕುಸಿಯಲು ಮೂಲ ಕಾರಣ ಅತಿಯಾದ ಭಾರ, ಇಂದ್ರಯಾಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ನಿಂತು ಇಂದ್ರಯಾಣಿ ಹರಿವನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರು ಸೇತುವೆ ಕುಸಿಯುತ್ತಿದ್ದಂತೆ ನೀರುಪಾಲಾಗಿದ್ದಾರೆ. ದುರ್ಘಟನೆ ಘಟಿಸಿದಾಗ 100ಕ್ಕೂ ಹೆಚ್ಚು ಪ್ರವಾಸಿಗರು ಸೇತುವೆ ಮೇಲಿದ್ದರೆ, ನಾಲ್ಕಕ್ಕೂ ಹೆಚ್ಚು ಬೈಕ್ ಗಳು ಕೂಡಾ ಸ್ಥಳದಲ್ಲಿದ್ವು. ಹಾಗೆ ನೋಡಿದರೆ 470 ಮೀಟರ್ ಉದ್ದದ ಸೇತುವೆ ಮೂರು ಭಾಗಗಳಲ್ಲಿ ನಿರ್ಮಾಣವಾಗಿದೆ. ಆರಂಭದಲ್ಲಿ ಕಲ್ಲಿನ ನಿರ್ಮಾಣವಿದ್ರೆ, ಮುಂದಿನದ್ದು ಕಬ್ಬಿಣ ಮತ್ತೆ, ಕಲ್ಲಿನ ನಿರ್ಮಾಣವಿದೆ. 1995ರ ಆಸುಪಾಸಿನಲ್ಲಿ ನಿರ್ಮಾಣವಾದ ಸೇತುವೆ, ಸಂಪೂರ್ಣ ಶಿಥಿಲಗೊಂಡಿತ್ತು. ಕಬ್ಬಿಣದ ಭಾಗ ತುಕ್ಕು ಹಿಡಿದು ಹೋಗಿತ್ತು. ಈ ಬಗ್ಗೆ ಸ್ಥಳೀಯರು ಹತ್ತಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ನಯಾ ಪೈಸೆ ಪ್ರಯೋಜನವಾಗಿರ್ಲಿಲ್ಲ. ಇದರ ಪರಿಣಾಮವೇ ಎನ್ನುವಂತೀಗ ಸೇತುವೆ ನೆಲಸಮವಾಗಿದೆ.
ನೀರುಪಾಲಾದವರ ಪಾಲಿಗೆ ಎನ್ ಡಿಆರ್ ಎಫ್ ಆಪತ್ಬಾಂಧವ
ಸೇತುವೆ ಕುಸಿತ ಸುದ್ದಿ ತಿಳಿಯುತ್ತಿದ್ದಂತೆ ಎನ್ ಡಿಆರ್ ಎಫ್ ಅಖಾಡಕ್ಕಿಳಿದಿದೆ. 100ಕ್ಕೂ ಹೆಚ್ಚು ಜನ ನೀರುಪಾಲಾದವರ ರಕ್ಷಣಾ ಕಾರ್ಯ ಆರಂಭಿಸಿದೆ. ಹರಿಯೋ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 80ಕ್ಕೂ ಹೆಚ್ಚು ಜನರನ್ನು ಬಚಾವ್ ಮಾಡಲಾಗಿದೆ. ಆದರೆ ನಾಲ್ವರು ಇಂದ್ರಯಾಣಿಯ ಆರ್ಭಟಕ್ಕೆ ಪ್ರಾಣತೆತ್ತಿದ್ದಾರೆ. ಒಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದ ಮಹಾ ನಿರ್ಲಕ್ಷ್ಯ 4 ಜೀವಗಳನ್ನು ಬಲಿ ಪಡೆದಿದ್ದರೆ, 6 ಮಂದಿ ಇನ್ನೂ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.