ಅಹಮದಾಬಾದ್: ಜೂನ್ 12ರ ಗುರುವಾರ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ತೆರಳುವಾಗ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾದ AI171 ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ದುರಂತಕ್ಕೀಡಾಯಿತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಒಬ್ಬ ಪ್ರಯಾಣಿಕ ಹೊರತುಪಡಿಸಿ ಉಳಿದ ಎಲ್ಲ 241 ಜನರೂ ದುರಂತದಲ್ಲಿ ಬಲಿಯಾದರು. ವಿಮಾನವು ಹೋಗಿ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಂಡ ಕಾರಣ, ನೆಲದಲ್ಲಿದ್ದ 30ಕ್ಕೂ ಅಧಿಕ ಮಂದಿಯೂ ಪ್ರಾಣ ಕಳೆದುಕೊಂಡರು. ಈ ಘಟನೆಯು ಬೋಯಿಂಗ್ 787 ಡ್ರೀಮ್ಲೈನರ್ನ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಈ ಹಿಂದೆಯೇ ಎಚ್ಚರಿಕೆ:
ದುರಂತ ನಡೆಯುವ ಒಂದು ವರ್ಷದ ಮುಂಚೆ 2024ರಲ್ಲಿ, ಬೋಯಿಂಗ್ನ ಎಂಜಿನಿಯರ್ ಸ್ಯಾಮ್ ಸಲೆಹ್ಪುರ್, 787 ಡ್ರೀಮ್ಲೈನರ್ನ ತಯಾರಿಕೆಯಲ್ಲಿ ಗಂಭೀರ ರಚನಾತ್ಮಕ ದೋಷಗಳಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಅವರು, ಬೋಯಿಂಗ್ ಕಂಪನಿಯು ವಿಮಾನಗಳ ಉತ್ಪಾದನೆಯಲ್ಲಿ ಶಾರ್ಟ್ಕಟ್ಗಳನ್ನು ಬಳಸುತ್ತಿವೆ. ಸುರಕ್ಷತೆಗಿಂತ ಲಾಭಕ್ಕೆ ಹೆಚ್ಚು ಆದ್ಯತೆ ನೀಡಿದೆ ಎಂದು ಆರೋಪಿಸಿದ್ದರು. ಇದರ ಜೊತೆಗೆ, ಸಿಂಥಿಯಾ ಕಿಚನ್ಸ್ ಎಂಬ ಮಾಜಿ ಗುಣಮಟ್ಟ ನಿರ್ವಾಹಕಿ, 2009-2016ರ ಅವಧಿಯಲ್ಲಿ ಬೋಯಿಂಗ್ನ ಚಾರ್ಲ್ಸ್ಟನ್ ಘಟಕದಲ್ಲಿ ಗಂಭೀರ ಉತ್ಪಾದನಾ ದೋಷಗಳನ್ನು ಗುರುತಿಸಿದ್ದರು. ಈ ದೋಷಗಳು ಏರ್ ಇಂಡಿಯಾಗೆ ತಲುಪಿಸಲಾದ ಆರು ವಿಮಾನಗಳಲ್ಲಿದ್ದವು ಎಂದು ಆಕೆ ಆರೋಪಿಸಿದ್ದಾರೆ. ಇಷ್ಟಾದರೂ ಲೋಪಗಳನ್ನು ಸರಿಪಡಿಸಲು ಯಾರೂ ಮುಂದಾಗಲಿಲ್ಲವೇಕೆ ಎಂಬ ಪ್ರಶ್ನೆಗಳು ಮೂಡಿವೆ.
ತನಿಖೆಯ ಸ್ಥಿತಿ:
ಈ ದುರಂತದ ನಿಖರ ಕಾರಣವನ್ನು ಕಂಡುಹಿಡಿಯಲು ಭಾರತದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ವಿಮಾನ ಅವಘಡ ತನಿಖಾ ಸಂಸ್ಥೆ(AAIB) ತನಿಖೆಯನ್ನು ಆರಂಭಿಸಿದೆ. ವಿಮಾನದ ಬ್ಲಾಕ್ ಬಾಕ್ಸ್ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ನ್ನು ಪತ್ತೆಹಚ್ಚಲಾಗಿದ್ದು, ಇದರ ವಿಶ್ಲೇಷಣೆಯಿಂದ ದುರಂತದ ಕಾರಣಗಳ ಬಗ್ಗೆ ಒಳನೋಟ ಸಿಗಲಿದೆ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ಇನ್ನು ಬೋಯಿಂಗ್ ಕಂಪನಿಯು ಏರ್ ಇಂಡಿಯಾದ ಜೊತೆ ಸಂಪರ್ಕದಲ್ಲಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಸರ್ಕಾರದ ಕ್ರಮ:
ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು ಜೂನ್ 15 ರಿಂದ ಏರ್ ಇಂಡಿಯಾದ ಎಲ್ಲಾ ಬೋಯಿಂಗ್ 787-8/9 ವಿಮಾನಗಳ ಸುರಕ್ಷತಾ ತಪಾಸಣೆಗೆ ಆದೇಶಿಸಿದೆ. ಇದರಲ್ಲಿ ಇಂಧನ, ಎಂಜಿನ್ ಮತ್ತು ಹೈಡ್ರಾಲಿಕ್ ವ್ಯವಸ್ಥೆಗಳ ತಪಾಸಣೆ ಸೇರಿವೆ. ಈ ದುರಂತದ ನಂತರ ಭಾರತ ಸರ್ಕಾರವು ಬೋಯಿಂಗ್ ಡ್ರೀಮ್ಲೈನರ್ ಫ್ಲೀಟ್ನ್ನು ಕರ್ತವ್ಯದಿಂದ ಮುಕ್ತಗೊಳಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.