ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ (Chinnaswamy Stadium Stampede) ಹಾಗೂ ಸಾವಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಾರಣ ಎಂದು ಜೆಡಿಎಸ್ (JDS) ಗಂಭೀರ ಆರೋಪ ಮಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಆರ್ ಸಿಬಿ ಗೆಲುವಿನಲ್ಲಿ ಪ್ರಚಾರ ಪಡೆಯಲು ಡಿಕೆಶಿ ಮುಂದಾಗಿದ್ದಕ್ಕೆ ಈ ಘಟನೆ ನಡೆದಿದೆ. ಹೀಗಾಗಿ 11 ಜನ ಉಸಿರು ಚೆಲ್ಲಿದ್ದಾರೆ.

ಪ್ರಚಾರ ಪಡೆಯಲು ಹೋಗಿ ಹಲವರ ಉಸಿರು ನಿಲ್ಲಿಸಿದ ಡಿಸಿಎಂ ಡಿಕೆ ಶಿವಕುಮಾರ್ಗೆ ಧಿಕ್ಕಾರ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಮಾಡಬಹುದಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ವಿಧಾನಸೌಧದ ಮುಂದೆ ಆತುರಾತುರವಾಗಿ ಕಾರ್ಯಕ್ರಮ ಆಯೋಜಿಸಿ ಆರ್ಸಿಬಿ ತಂಡದ ಜೊತೆ ಸಿಎಂ, ಡಿಸಿಎಂ, ಸಚಿವರು ಮತ್ತವರ ಮಕ್ಕಳ ಫೋಟೋಶೂಟ್ ಶೋಕಿಗೆ ಮುಗ್ಧರು ಪ್ರಾಣ ಕಳೆದುಕೊಂಡಿರುವುದು ಘೋರ ದುರಂತ.
ವಿಧಾನಸೌಧ ಮುಂದೆಯೇ ಸರ್ಕಾರದ ಆಡಳಿತ ಯಂತ್ರ ಬೀಡು ಬಿಟ್ಟಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಸೇರಿದ್ದ ವೇಳೆ ಸೂಕ್ತ ಬಿಗಿ ಬಂದೋಬಸ್ತ್ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವುದು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿದೆ. ಕಾಲ್ತುಳಿತ ದುರಂತದಲ್ಲಿ 11 ಜನರ ಸಾವಿಗೆ ಡಿಸಿಎಂ ಡಿಕೆಶಿಯೇ ಹೊಣೆ ಹೊರಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.