ಮುಂಬಯಿ: ಭಾರತೀಯ ಕ್ರಿಕೆಟ್ನ ಭವಿಷ್ಯದ ತಾರೆ ಎಂದು ಬಿಂಬಿತವಾಗಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕುರಿತು ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಟಿ20, ಏಕದಿನ ಮಾದರಿಗಳನ್ನು ಮೀರಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿಯಾದರೆ, ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್ಗೆ ಹೊಸ ಮರುಜೀವ ನೀಡಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ಶ್ರೀಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಐಪಿಎಲ್ನಲ್ಲಿ ತೋರಿದ ಸ್ಪೋಟಕ ಪ್ರದರ್ಶನದ ಆಧಾರದ ಮೇಲೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಈ ಯುವ ಬ್ಯಾಟರ್, ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ರನ್ ಗಳಿಸುವ ಹಸಿವು ಹಾಗೂ ಬೌಲರ್ಗಳ ಮೇಲೆ ಸವಾರಿ ಮಾಡುವ ವಿಶಿಷ್ಟ ಶೈಲಿಯೇ ವೈಭವ್ ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ ಎಂದು ಶ್ರೀಕಾಂತ್ ಬಣ್ಣಿಸಿದ್ದಾರೆ. ವೀಕ್ಷಕರನ್ನು ಟಿವಿ ಪರದೆಯ ಮುಂದೆ ಕುಳಿತುಕೊಳ್ಳುವಂತೆ ಮಾಡುವಂತಹ ಅದ್ಭುತ ಆಕರ್ಷಣೆ ಹಾಗೂ ವರ್ಚಸ್ಸು ಈ ಆಟಗಾರನಲ್ಲಿದೆ. ಆದರೆ, ಪ್ರಸ್ತುತ ಅವರ ಮೇಲೆ ಯಾವುದೇ ರೀತಿಯ ಅನಗತ್ಯ ನಿರೀಕ್ಷೆಗಳ ಹೊರೆ ಹೇರುವ ಬದಲು, ಅವರ ನೈಸರ್ಗಿಕ ಆಟವನ್ನು ಆಡಲು ಹಾಗೂ ಬೆಳೆಯಲು ಸಾಕಷ್ಟು ಅವಕಾಶ ಮಾಡಿಕೊಡಬೇಕು ಎಂದು ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳಲ್ಲಿ ಶ್ರೀಕಾಂತ್ ಮನವಿ ಮಾಡಿದ್ದಾರೆ. ಟೀಕೆಗಳಿಗೆ ಕಿವಿಗೊಡದೆ, ನಿರ್ಭಯದಿಂದ ಬ್ಯಾಟ್ ಬೀಸುವತ್ತ ಮಾತ್ರ ಗಮನಹರಿಸಬೇಕೆಂದು ಅವರು ಕಿವಿಮಾತು ಹೇಳಿದ್ದಾರೆ.
ಒಂದು ಸರಣಿಯ ವೈಫಲ್ಯ ಮಾನದಂಡವಲ್ಲ
ಇತ್ತೀಚೆಗೆ ശ്രೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡದ ಪರ ವೈಭವ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿದ್ದರು. ಈ ಬಗ್ಗೆ ಎದುರಾಗುತ್ತಿರುವ ಟೀಕೆಗಳನ್ನು ಅಲ್ಲಗಳೆದಿರುವ ಶ್ರೀಕಾಂತ್, “ಯಾವುದೇ ಒಬ್ಬ ಆಟಗಾರನ ಸಾಮರ್ಥ್ಯವನ್ನು ಕೇವಲ ಒಂದು ಸರಣಿಯ ವೈಫಲ್ಯದ ಆಧಾರದ ಮೇಲೆ ಅಳೆಯುವುದು ಸರಿಯಲ್ಲ. ಐಪಿಎಲ್ನಂತಹ ಬೃಹತ್ ವೇದಿಕೆಯಲ್ಲಿ ಜಗತ್ತಿನ ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕಿ ಅತ್ಯುತ್ತಮ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆತನಿಗೆ ಸಾಕಷ್ಟು ಸಮಯ ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಆತನನ್ನು ತರಾತುರಿಯಲ್ಲಿ ಅಳೆಯಬಾರದು” ಎಂದು ಎಚ್ಚರಿಸಿದ್ದಾರೆ. ಉತ್ತಮವಾಗಿ ಅವರನ್ನು ರೂಪಿಸಿದರೆ, ಭಾರತೀಯ ಕ್ರಿಕೆಟ್ಗೆ ಅವರು ದೊಡ್ಡ ಆಸ್ತಿಯಾಗಲಿದ್ದಾರೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ತಂಡದ ವಾತಾವರಣದಲ್ಲಿ ಪಳಗುವಿಕೆ
ಜೂನ್ 26ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿದ್ದರೂ, ತಂಡದೊಂದಿಗಿರುವ ಅವಕಾಶವೇ ಅವರಿಗೆ ದೊಡ್ಡ ಕಲಿಕೆಯಾಗಲಿದೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರಂತಹ ಆಟಗಾರರೊಂದಿಗೆ ಇರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನ ತೀವ್ರತೆ ಹಾಗೂ ಒತ್ತಡ ನಿಭಾಯಿಸುವುದನ್ನು ಕಲಿಯಲು ಇದು ಉತ್ತಮ ವೇದಿಕೆಯಾಗಲಿದೆ. ಈ ವೇಳೆ ಸಚಿನ್ ತೆಂಡೂಲ್ಕರ್ ಅವರಿಗೆ ಅವರನ್ನು ಹೋಲಿಸುವುದನ್ನು ನಿರಾಕರಿಸಿದ ಶ್ರೀಕಾಂತ್, ಸಚಿನ್ ‘ಕ್ರಿಕೆಟ್ ದೇವರು’ ಆದರೆ ವೈಭವ್ ಅವರನ್ನು ಆ ದೇವರ ಮಗನೆಂದು ಕರೆಯಬಹುದು, ಅವರೆಂದಿಗೂ ಸಚಿನ್ ಜಾಗ ಆಕ್ರಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಸಾಧಾರಣ ಬ್ಯಾಟ್ ಸ್ವಿಂಗ್ ಹಾಗೂ ಮಣಿಕಟ್ಟಿನ ಕೌಶಲ್ಯ ಹೊಂದಿರುವ ಟೀಮ್ ಇಂಡಿಯಾದ ಈ ನವ ಮನ್ಮಥ ಭವಿಷ್ಯದಲ್ಲಿ ಅದ್ಭುತ ಸಾಧನೆ ಮಾಡುವುದು ನಿಶ್ಚಿತ.



















