ಬೀದರ್: ಹೇಮಾವತಿ ಲಿಂಕ್ ಕೆನಾಲ್ ವಿವಾದಕ್ಕೆ ಸಂಬಂಧಪಟ್ಟಂತೆ ರೈತರ ಹಿತ ಕಾಪಾಡುತ್ತೇವೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತುಮಕೂರು ಸಂಸದ, ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಪಾದಕ್ಕೆ ಕೋಟಿ ನಮಸ್ಕಾರ ಮಾಡಿ ಬಿಡ್ತೀನಿ. ಶಿವಕುಮಾರ್ ಹೀಗ್ಯಾಕೆ ಆದನೋ ಗೊತ್ತಿಲ್ಲ. ಯಾತಕ್ಕಾಗಿ ಈ ರೀತಿ ಗಂಟು ಬಿದ್ದಿದ್ದಾನೋ ಗೊತ್ತಿಲ್ಲ. ತುಮಕೂರು ಜನ ಮುಗ್ದರು. ನನಗೋಸ್ಕರ ಆದರೂ ಅದನ್ನು ಬದಲಾವಣೆ ಮಾಡಿಕೊಳ್ಳುವಂತೆ ಹೇಳಿದ್ದೆ. ಬೇರೆಯವರು ಈ ರೀತಿ ಮಾಡಿದ್ದಾರೆ.
ಅವರು ಹೆಸರು ಇರುವುದಕ್ಕೆ ಮಾಡ್ತಿದ್ದಾರೋ ಗೊತ್ತಿಲ್ಲ. ಹೀಗೆ ಆಗಬಾರದು. 1200 ಕ್ಯೂಸೆಕ್ಸ್ ನೀರು ಈಗಾಗಲೇ 5 ತಾಲ್ಲೂಕುಗಳಿಗೆ ಹಂಚಿಕೆಯಾಗಿದೆ. ಹೆಂಗೋ ನೆಮ್ಮದಿಯಿಂದ ಅವರ ಕೆಲಸ ಮಾಡ್ಕೊಂಡು ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ನಾವ್ಯಾಕೆ ಹುಳಿ ಹಿಂಡಬೇಕು ಎಂದಿದ್ದಾರೆ.
ಇನ್ನೊಂದು ಹೊಸ ಲೈನ್ ಮಾಡಿಕೊಂಡು ಹೋಗು ನೀನೇ ಮಹಾರಾಜ, ನೀನೇ ಉಪ ಮುಖ್ಯಮಂತ್ರಿ ಇದ್ದೀಯಾ, ಬೇಕಾದರೆ ಇನ್ನೊಂದು ಚೇರ್ ಹಾಕಿಕೋ ಬೇಡ ಎನ್ನುವುದಿಲ್ಲ. ಆದರೆ, ಬಡ ಜನರಿಗೆ ತೊಂದರೆ ಕೊಡಬೇಡ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.