ನವದೆಹಲಿ: ಅಕಸ್ಮಾತಾಗಿ ಗಡಿ ದಾಟಿ ಹೋಗಿ ಪಾಕಿಸ್ತಾನದಲ್ಲಿ ಬಂಧಿತರಾಗಿದ್ದ ಬಿಎಸ್ಎಫ್ (ಗಡಿ ಭದ್ರತಾ ಪಡೆ) ಯೋಧನನ್ನು ಬುಧವಾರ ಬೆಳಗ್ಗೆ ಪಾಕಿಸ್ತಾನದ ಸೇನೆಯು ಭಾರತಕ್ಕೆ ಹಸ್ತಾಂತರಿಸಿದೆ(BSF Jawan Repatriated).
ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯ ಮಾರನೇ ದಿನವೇ ಏಪ್ರಿಲ್ 23ರಂದು ಅಕಸ್ಮಾತಾಗಿ ಬಿಎಸ್ಎಫ್ ಕಾನ್ಸ್ಟೇಬಲ್ ಪೂರ್ಣಂ ಕುಮಾರ್ ಶಾ ಅವರು ಗಡಿ ದಾಟಿದ್ದರು. ಕೂಡಲೇ ಅವರನ್ನು ಪಾಕಿಸ್ತಾನಿ ರೇಂಜರ್ ಗಳು ವಶಕ್ಕೆ ಪಡೆದಿದ್ದರು. ಅಂದಿನಿಂದ ಅವರು ಪಾಕ್ ವಶದಲ್ಲೇ ಇದ್ದರು. ಎರಡೂ ದೇಶಗಳ ಸೇನೆಯ ನಡುವೆ ಅಸ್ತಿತ್ವದಲ್ಲಿರುವ ಶಿಷ್ಟಾಚಾರಕ್ಕೆ ಅನುಗುಣವಾಗಿ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಗ್ಗೆ 10.30ಕ್ಕೆ ಸರಿಯಾಗಿ ಅಟ್ಟಾರಿಯ ಜಂಟಿ ಚೆಕ್ ಪೋಸ್ಟ್ನಲ್ಲಿ ಪಾಕಿಸ್ತಾನ ಸೇನೆಯು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದೆ. ಈ ಪ್ರಕ್ರಿಯೆಯು ಅತ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಪ್ರಸ್ತುತ ಪೂರ್ಣಂ ಕುಮಾರ್ ಶಾ ಅವರನ್ನು ಭದ್ರತಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಧ ಶಾ ಅವರು ಬಿಎಸ್ಎಫ್ನ 182ನೇ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಏಪ್ರಿಲ್ 23ರಂದು ಪಂಜಾಬ್ನ ಫಿರೋಜ್ಪುರದಲ್ಲಿ ತಪ್ಪಾಗಿ ಅಂತಾರಾಷ್ಟ್ರೀಯ ಗಡಿ ದಾಟಿದ್ದರು. ಗಡಿ ಬೇಲಿಯ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಪೂರ್ಣಂ ಕುಮಾರ್ ಶಾ ಅವರು ಸ್ವಲ್ಪ ಹೊತ್ತು ವಿರಮಿಸಲೆಂದು ನೆರಳನ್ನು ಹುಡುಕುತ್ತಾ ಸಾಗಿ, ಗೊತ್ತಾಗದೇ ಅಕಸ್ಮಾತಾಗಿ ಗಡಿ ದಾಟಿದ್ದರು. ಈ ಸಮಯದಲ್ಲಿ ಅವರು ಸೇನೆಯ ಉಡುಪು ಧರಿಸಿದ್ದು, ಕೈಯ್ಯಲ್ಲಿ ಸರ್ವೀಸ್ ರೈಫಲ್ ಕೂಡ ಇತ್ತು. ತತ್ಕ್ಷಣವೇ ಅವರನ್ನು ಪಾಕಿಸ್ತಾನಿ ರೇಂಜರ್ ಗಳನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಹೈವೋಲ್ಟೇಜ್
ಈ ಘಟನೆಯ ವೇಳೆಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಆರಂಭವಾಗಿತ್ತು. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಭಾರತವು ಉಗ್ರರ ವಿರುದ್ಧ ಪ್ರತೀಕಾರ ಆರಂಭಿಸಿತ್ತು. ನಂತರದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಹಲವು ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನೂ ನಡೆಸಿತ್ತು. ನಂತರದಲ್ಲಿ ಉಭಯ ದೇಶಗಳ ನಡುವೆ ದಾಳಿ-ಪ್ರತಿದಾಳಿ ಆರಂಭವಾಗಿ ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹೀಗಾಗಿ ಯೋಧನ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ಯೋಧ ಪೂರ್ಣ ಕುಮಾರ್ ಶಾ ಅವರು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದು, ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.