ಕೇಂದ್ರದ ಮೋದಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ ಎಂಬ ಸಂದೇಶವನ್ನು ದೇಶಕ್ಕೆ ನೀಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ನಿರ್ಧಾರವನ್ನು ದೇಶದ ಜನ ಸ್ವಾಗತಿಸಿದ್ದಾರೆ. ಹಿಂದೆ ಬ್ರಿಟೀಷರು ಇದ್ದಾಗ 1931ರಲ್ಲಿ ಜಾತಿ ಗಣತಿ ಮಾಡಿದ್ದರು. ಅದಾದ ಬಳಿಕ ನೆಹರು ಮೂರು ಬಾರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಧಾನಿ ಆಗಿದ್ದರು. ಬಳಿಕ ಸೋನಿಯಾ ಅವರ ಅಡ್ವೈಸರಿ ಮೇಲೆ ಹತ್ತು ವರ್ಷಗಳ ಕಾಲ ಪ್ರಧಾನಿ ಆಗಿದ್ದರು.
ಅವರು ಯಾರಿಗೂ ಜಾತಿಗಣತಿ ಮಾಡಬೇಕು. ಸಾಮಾಜಿಕ ನ್ಯಾಯ ಕೊಡಬೇಕು ಅನಿಸಿರಲಿಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಸುದ್ದಿಗೋಷ್ಟಿ ಕರೆದಿದ್ದಾರೆ. ಅವರ್ಯಾರಿಗೂ 70 ವರ್ಷದಲ್ಲಿ ಜಾತಿ ಗಣತಿ ಸಮೀಕ್ಷೆ ಮಾಡಬೇಕು ಅನಿಸಲಿಲ್ಲ. 2010ರಲ್ಲಿ ಮನಮೋಹನ್ ಸಿಂಗ್ ಜಾತಿ ಗಣತಿ ತಿರಸ್ಕಾರ ಮಾಡಿದ್ದರು. ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಬುದ್ದಿ ಬಂತಲ್ಲ ಅಂತ ಕಾಮೆಂಟ್ ಮಾಡಿದ್ದಾರೆ. ಬುದ್ದಿ ಬಂದಿರುವುದು ಕಾಂಗ್ರೆಸ್ ನವರಿಗೆ. ಬಿಜೆಪಿಯವರಿಗಲ್ಲ ಎಂದಿದ್ದಾರೆ.
ಕಾಂಗ್ರೆಸ್ ನವರಿಗೆ ಅವರಿಗೆ ಬುದ್ದಿಯೇ ಇರಲಿಲ್ಲ. ನಾವು ಮಾಡಿರುವುದಕ್ಕೆ ನೀವು ಸ್ವಾಗತ ಮಾಡಿ. ಸಿದ್ದರಾಮಯ್ಯ 2015ರಲ್ಲಿ ಮಾಡಿದರೂ 2025 ಆದರೂ ಎದ್ನೋ, ಬಿದ್ನೋ ಅಂತ ಆಗಿದೆ. ಇದಕ್ಕೆ ಕಾಲಮಿತಿಯೇ ಇಲ್ಲ. ಖರ್ಗೆ ಅವರು ಒಂದು ಹಂತ ಮುಂದಕ್ಕೆ ಹೋಗಿ, ಹಣ ಬಿಡುಗಡೆ ಮಾಡಬೇಕು ಅಂದಿದ್ದಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಯಾಕೆ ಹಣ ಬಿಡುಗಡೆ ಮಾಡಲಿಲ್ಲ. ನಿಮಗೆ ನಾಚಿಕೆ ಆಗಬೇಕು. ತಪ್ಪು ಒಪ್ಪಿಕೊಳ್ಳಿ, ನಮಗೆ ಹಣ ಬಿಡುಗಡೆ ಮಾಡಲು ಆಗಲಿಲ್ಲ ಅಂತ ಎಂದು ಹೇಳಿದ್ದಾರೆ.
ಈ ಸಮೀಕ್ಷೆ ಮಾಡಲು ಒಪ್ಪಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ. 2029ಕ್ಕೆ ಮಹಿಳಾ ರಿಸರ್ವೇಷನ್ ಮಾಡ್ತೀವಿ ಅಂತ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಬರೀ ಮಹಿಳಾ ಮೀಸಲಾತಿ ಅಂತ ಅಷ್ಟೇ ಹೇಳಿದೆ. ಮಾಡಿಲ್ಲ. ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವ ನಿರ್ಧಾರ ಮೋದಿ ಕ್ಯಾಬಿನೆಟ್ ತೆಗೆದುಕೊಂಡಿದೆ. ಹೀಗಾಗಿ ಪ್ರಧಾನಿ ಅವರಿಗೆ ಹೃದಯದಾಳದಿಂದ ವಂದನೆ ತಿಳಿಸುತ್ತೇನೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಅಕ್ಟೋಬರ್ ತಿಂಗಳಿನಲ್ಲಿ ಅಧಿಕಾರ ಹಸ್ತಾಂತರ ಮಾಡುತ್ತಾರೆ. ಆದರೆ, ಅವರಿಗೆ ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲ. ಹೀಗಾಗಿ ಅವರು ಜಾತಿ ಗಣತಿಯ ಅಸ್ತ್ರ ಹೂಡಿದ್ದಾರೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ಹಸ್ತಾಂತರ ಮಾಡಬೇಕು.
ಅದು ಆಗಬಾರದು ಅಂತ ಜಾತಿ ಗಣತಿ ವರದಿ ಬಿಡುಗಡೆ ಮಾಡಬಹುದು. ಎಲ್ಲರ ವಿರೋಧ ಇರುವುದರಿಂದ ತಾವು ಅಧಿಕಾರದಲ್ಲಿ ಉಳಿದುಕೊಳ್ಳಲು ವರದಿ ಬಿಡುಗಡೆ ಮಾಡಬಹುದು ಎಂದಿದ್ದಾರೆ.