ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ, 26 ಹಿಂದೂ ಪ್ರವಾಸಿಗರ ಮಾರಣಹೋಮವು ಭಾರತ ಮತ್ತು ಪಾಕಿಸ್ತಾನದ ಸಂಬಂಧದಲ್ಲಿ ದೊಡ್ಡ ಮಟ್ಟದ ಬಿರುಕು ಉಂಟುಮಾಡಿದೆ. ದಾಳಿಯ ಬೆನ್ನಲ್ಲೇ ಭಾರತ ಸರ್ಕಾರವು, ಉಗ್ರರನ್ನು ಪೋಷಿಸುತ್ತಾ, ಉಗ್ರ ಸಂಘಟನೆಗಳಿಗೆ ನೇರ ಹಾಗೂ ಪರೋಕ್ಷ ನೆರವನ್ನು ನೀಡುತ್ತಾ ಬಂದಿರುವ ಪಾಕಿಸ್ತಾನಕ್ಕೆ ಮರ್ಮಾಘಾತ ಉಂಟುಮಾಡಿದೆ.
ಐತಿಹಾಸಿಕ ಸಿಂಧೂ ಜಲ ಒಪ್ಪಂದದ ಅಮಾನತು ಸೇರಿದಂತೆ ಹಲವು ಕಠಿಣ ಹಾಗೂ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪಾಪಿಗಳ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದೆ. ಸಿಂಧೂ ನದಿ ಒಪ್ಪಂದದ ಅಮಾನತು ಈಗ ಉಭಯ ರಾಷ್ಟ್ರಗಳ ನಡುವೆ ಜಲಯುದ್ಧಕ್ಕೆ ಸಾಕ್ಷಿಯಾಗಲಿದೆಯೇ ಎಂಬ ಪ್ರಶ್ನೆಯೂ ಮೂಡಿದೆ. ಸಿಂಧೂ ನದಿ ಒಪ್ಪಂದ ಹಾಗೂ ಮುಂದಿನ ಸಾಧ್ಯತೆಗಳ ಕುರಿತು ಸಮಗ್ರವಾದ ಮಾಹಿತಿ ಇಲ್ಲಿದೆ:
…
ಏನಿದು ಸಿಂಧೂ ಜಲ ಒಪ್ಪಂದ?
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಅಂತಾರಾಷ್ಟ್ರೀಯ ಒಪ್ಪಂದವೇ ಸಿಂಧೂ ಜಲ ಒಪ್ಪಂದ (Indus Waters Treaty – IWT). ವಿಶ್ವಬ್ಯಾಂಕ್ನ ಮಧ್ಯಸ್ಥಿಕೆಯಲ್ಲಿ ಈ ಮಹತ್ವದ ಒಪ್ಪಂದಕ್ಕೆ ಉಭಯ ರಾಷ್ಚ್ರಗಳು ಸಹಿ ಹಾಕಿದವು. ಸಿಂಧೂ ನದಿಯ ಆರು ಉಪನದಿಗಳ ನೀರಿನ ಹಂಚಿಕೆಯನ್ನು ನಿಯಂತ್ರಿಸುವ ಒಪ್ಪಂದ ಇದಾಗಿದೆ. 1960ರ ಸೆಪ್ಟೆಂಬರ್ 19ರಂದು ಭಾರತದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಆಗಿನ ಅಧ್ಯಕ್ಷ ಅಯೂಬ್ ಖಾನ್ರವರು ಈ ಒಪ್ಪಂದಕ್ಕೆ ಕರಾಚಿಯಲ್ಲಿ ಸಹಿ ಹಾಕಿದ್ದರು. ಸಿಂಧೂ, ಝೇಲಂ, ಚೇನಾಬ್, ರಾವಿ, ಬಿಯಾಸ್, ಮತ್ತು ಸಟ್ಲೆಜ್ ನದಿಗಳ ನೀರಿನ ಹಂಚಿಕೆಯನ್ನು ಈ ಒಪ್ಪಂದವು ನಿರ್ಧರಿಸಿತು.
ಒಪ್ಪಂದದಲ್ಲೇನಿದೆ?
ಒಪ್ಪಂದದ ಅನ್ವಯ, ಪೂರ್ವದ ನದಿಗಳಾದ ರಾವಿ, ಬಿಯಾಸ್, ಸಟ್ಲೆಜ್ ಗಳ ಸಂಪೂರ್ಣ ನೀರಿನ (ವಾರ್ಷಿಕವಾಗಿ 41 ಶತಕೋಟಿ ಘನ ಮೀಟರ್ಗಳು) ಬಳಕೆಯ ಹಕ್ಕನ್ನು ಭಾರತಕ್ಕೆ ನೀಡಲಾಯಿತು. ಅದೇ ರೀತಿ, ಪಶ್ಚಿಮದ ನದಿಗಳಾದ ಸಿಂಧೂ, ಝೇಲಂ, ಚೇನಾಬ್ ನದಿಗಳ ನೀರಿನ (ವಾರ್ಷಿಕವಾಗಿ 99 ಶತಕೋಟಿ ಘನ ಮೀಟರ್ಗಳು) ಬಹುಪಾಲು ಬಳಕೆಯ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಭಾರತವು ಈ ನದಿಗಳ ನೀರನ್ನು ಸೀಮಿತ ಕೃಷಿ ಬಳಕೆಗೆ ಮತ್ತು ಜಲವಿದ್ಯುತ್ ಉತ್ಪಾದನೆ, ನೌಕಾಯಾನ, ಮೀನು ಸಾಕಾಣಿಕೆ ಇತ್ಯಾದಿಗಳಿಗೆ ಬಳಸಬಹುದು ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು.

ಸಿಂಧೂ ಜಲ ಒಪ್ಪಂದ ಅನಿರ್ದಿಷ್ಟಾವಧಿಗೆ ಅಮಾನತು
ಈ ಒಪ್ಪಂದವು 1965, 1971, ಮತ್ತು 1999ರ ಯುದ್ಧಗಳಂತಹ ಭಾರತ-ಪಾಕಿಸ್ತಾನದ ಘರ್ಷಣೆಗಳನ್ನೂ ಒಳಗೊಂಡಂತೆ ಹಲವು ದಶಕಗಳ ಕಾಲ ಅಂದರೆ ಇತ್ತೀಚಿನವರೆಗೂ ಉಳಿದುಕೊಂಡು ಬಂದಿದೆ. ಆದರೆ, ಇತ್ತೀಚೆಗೆ (2025ರ ಏಪ್ರಿಲ್ 22ರಂದು) ಜಮ್ಮು ಕಾಶ್ಮೀರದ ಪೆಹಲ್ಗಾಮ್ ಎಂಬಲ್ಲಿನ ಬೈಸರನ್ ಕಣಿವೆ ಪ್ರದೇಶದಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಘಟನೆಗೂ, ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಕಾರಣಕ್ಕೆ ಭಾರತ ಸರ್ಕಾರವು ಪ್ರತೀಕಾರದ ಕ್ರಮವಾಗಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿರುವುದಾಗಿ ಘೋಷಿಸಿದೆ.
ಉಗ್ರರ ಈ ದಾಳಿಯ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳಿರುವ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಭಾರತ ಸ್ಪಷ್ಟನೆ ನೀಡಿದೆ. “ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ಕೈಬಿಡುವವರೆಗೂ ಒಪ್ಪಂದವನ್ನು ಅಮಾನತಿನಲ್ಲಿಡಲಾಗುವುದು” ಎಂದೂ ಭಾರತ ಘೋಷಿಸಿದೆ. ಒಪ್ಪಂದವು ಅಮಾನತುಗೊಂಡಿರುವ ಕಾರಣ, ಭಾರತವು ಈಗ ಒಪ್ಪಂದದ ಷರತ್ತುಗಳಿಗೆ ಬದ್ಧವಾಗಿರಬೇಕಾದ ಅಗತ್ಯವಿಲ್ಲ. ಅಲ್ಲದೇ, ಪಾಕಿಸ್ತಾನಕ್ಕೆ ನೀರಿನ ಹರಿವಿನ ಮಾಹಿತಿಯನ್ನು ಭಾರತವು ಹಂಚಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ ಮತ್ತು ಪಾಕಿಸ್ತಾನದಿಂದ ಯಾವುದೇ ತಾಂತ್ರಿಕ ತಪಾಸಣೆ ಭೇಟಿಗಳಿಗೂ ಭಾರತ ಅವಕಾಶ ಕಲ್ಪಿಸುವುದಿಲ್ಲ..
ಸಿಂಧೂ ನದಿಯ ನೀರು ತಡೆಹಿಡಿಯಲು ಭಾರತಕ್ಕೆ ಸಾಧ್ಯವೇ?
ಒಪ್ಪಂದವು ಈಗ ಅಮಾನತುಗೊಂಡಿರುವ ಕಾರಣ ಪಾಕಿಸ್ತಾನಕ್ಕೆ ಹರಿಯುವ ಸಿಂಧೂ, ಝೇಲಂ, ಮತ್ತು ಚೇನಾಬ್ ನದಿಗಳ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿದೆಯೇ ಎಂಬ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಪಾಕಿಸ್ತಾನವು ತನ್ನ ಕೃಷಿಯ ಶೇ.80ಕ್ಕೂ ಹೆಚ್ಚು (ಸುಮಾರು 16 ಮಿಲಿಯನ್ ಹೆಕ್ಟೇರ್ ಭೂಮಿ) ಮತ್ತು ಜಲವಿದ್ಯುತ್ ಉತ್ಪಾದನೆಯ 25%ಗೆ ಸಿಂಧೂ ನದಿ ನೀರಿನ ಮೇಲೆ ಅವಲಂಬಿತವಾಗಿದೆ.
ಅಲ್ಲದೇ ಲಾಹೋರ್, ಕರಾಚಿ, ಮತ್ತು ಮುಲ್ತಾನ್ನಂತಹ ಪ್ರಮುಖ ನಗರಗಳಿಗೆ ಕುಡಿಯುವ ನೀರನ್ನೂ ಇದು ಒದಗಿಸುತ್ತವೆ. ಒಂದು ವೇಳೆ ಭಾರತವು ಈ ನೀರಿನ ಹರಿವನ್ನು ಗಣನೀಯವಾಗಿ ಕಡಿಮೆ ಮಾಡಿದರೆ, ಪಾಕಿಸ್ತಾನದ ಕೃಷಿ, ಆರ್ಥಿಕತೆ, ಆಹಾರ ಭದ್ರತೆ ಮತ್ತು ಜನಜೀವನದ ಮೇಲೆ ತೀವ್ರ ರೀತಿಯ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಿದ್ದಾಗ್ಯೂ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಸಂಪೂರ್ಣವಾಗಿ ತಡೆಯುವುದು ಸದ್ಯಕ್ಕಂತೂ ಭಾರತಕ್ಕೆ ಸಾಧ್ಯವಿಲ್ಲ.
ಭಾರತವು ಅಷ್ಟೊಂದು ಪ್ರಮಾಣದ ನೀರನ್ನು ತಡೆಹಿಡಿದರೂ ಅದನ್ನು ಸಂಗ್ರಹಿಸುವ ಅಥವಾ ಶೇಖರಿಸಿಡುವ ಮೂಲಸೌಕರ್ಯ ಭಾರತದ ಬಳಿಯಿಲ್ಲ. ನದಿ ನೀರಿನ ಪಥ ಬದಲಾಯಿಸುವ ಸಾಮರ್ಥ್ಯವೂ ಭಾರತಕ್ಕಿಲ್ಲ. ಅಂದರೆ, ಭಾರತದಲ್ಲಿರುವ ಬಹುತೇಕ ಜಲಾಶಯಗಳು “ರನ್-ಆಫ್-ದಿ-ರಿವರ್” ಜಲವಿದ್ಯುತ್ ಯೋಜನೆಗಳಾಗಿವೆ. ಹಾಗಂದರೆ ಇವು ದೊಡ್ಡ ಪ್ರಮಾಣದ ನೀರನ್ನು ಶೇಖರಿಸದೆ, ನದಿಯ ಸಹಜ ಹರಿವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವಂಥ ಯೋಜನೆಗಳಾಗಿವೆ. ಆದರೆ, ಭಾರತವು ತನ್ನ ನೀರಿನ ಶೇಖರಣಾ ಹಾಗೂ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ನೀರು ತಡೆಯುವ ನಿಟ್ಟಿನಲ್ಲಿ ಕೇಂದ್ರ ಕೈಗೊಂಡಿರುವ ಕ್ರಮಗಳೇನು?
ಬೈಸರನ್ ಕಣಿವೆ ಮೇಲೆ ರಕ್ಕಸ ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರವೆಂಬಂತೆ ಭಾರತ ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಹರಿಯುವ ನೀರಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸ್ಥಾಪಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಅವೆಂದರೆ,
- ಮಾಹಿತಿ ಹಂಚಿಕೆ ಸ್ಥಗಿತ: ಭಾರತವು ಪಾಕಿಸ್ತಾನಕ್ಕೆ ಜಲಾಶಯಗಳಿಂದ ನೀರಿನ ಬಿಡುಗಡೆ, ಪ್ರವಾಹ ಎಚ್ಚರಿಕೆ, ಅಥವಾ ಒಣಗುವ ಸಾಧ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. ಇದರಿಂದ ಪಾಕಿಸ್ತಾನಕ್ಕೆ ನೀರಿನ ಲಭ್ಯತೆಯನ್ನು ಲೆಕ್ಕ ಹಾಕುವುದು, ಊಹಿಸುವುದು ಕಷ್ಟವಾಗಬಹುದು.
- ಪಶ್ಚಿಮದ ನದಿಗಳ ಮೇಲಿನ ಯೋಜನೆಗಳ ವೇಗವರ್ಧನೆ: ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ಪಶ್ಚಿಮದ ನದಿಗಳಾದ ಚೇನಾಬ್ ಮತ್ತು ಝೇಲಂನ ಮೇಲಿನ ಜಲವಿದ್ಯುತ್ ಯೋಜನೆಗಳಾದ ಪಕಲ್ ದುಲ್ (1,000 ಮೆಗಾವಾಟ್), ರತ್ಲೆ (850 ಮೆಗಾವಾಟ್), ಕಿರು (624 ಮೆಗಾವಾಟ್), ಮತ್ತು ಸಾವಲ್ಕೋಟ್ (1,856 ಮೆಗಾವಾಟ್) ಯೋಜನೆಗಳಿಗೆ ಹೆಚ್ಚಿನ ವೇಗ ನೀಡಿದೆ. ಈ ಯೋಜನೆಗಳು ಒಪ್ಪಂದದ ಷರತ್ತುಗಳಿಗೆ ಅನುಗುಣವಾಗಿರುವುದರಿಂದ, ಇವುಗಳ ಮೇಲಿನ ಪಾಕಿಸ್ತಾನದ ಆಕ್ಷೇಪಣೆಗಳಿಗೆ ಈಗ ಯಾವುದೇ ಕಾನೂನಾತ್ಮಕ ಮಾನ್ಯತೆ ಇರುವುದಿಲ್ಲ. ಈ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡುವುದು ಕೇಂದ್ರದ ಉದ್ದೇಶವಾಗಿದೆ.
- ಜಲಾಶಯಗಳ ಹೂಳೆತ್ತುವಿಕೆ: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು, ಪಾಕಿಸ್ತಾನಕ್ಕೆ “ಒಂದೇ ಒಂದು ಹನಿ ನೀರೂ ಹರಿಯದಂತೆ” ಮಾಡಲು ನದಿಗಳ ಹೂಳೆತ್ತುವಿಕೆ (ರಿವರ್ ಡಿಸಿಲ್ಟಿಂಗ್) ಯಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಇದರಿಂದ ಜಲಾಶಯಗಳ ಸಾಮರ್ಥ್ಯವೂ ಹೆಚ್ಚುತ್ತದೆ ಹಾಗೂ ನೀರಿನ ಶೇಖರಣೆಯೂ ಸುಧಾರಿಸುತ್ತದೆ.
- ರಾಜತಾಂತ್ರಿಕ ಕ್ರಮಗಳು: ಸಿಂಧೂ ಜಲ ಒಪ್ಪಂದದ ಅಮಾನತು ಮಾತ್ರವಲ್ಲದೇ, ಭಾರತವು ಅಟ್ಟಾರಿ-ವಾಘಾ ಗಡಿ ಮುಚ್ಚುವ, ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿಯ ಸಂಖ್ಯೆಯನ್ನು ಕಡಿತಗೊಳಿಸುವ, ಪಾಕಿಸ್ತಾನಿ ನಾಗರಿಕರಿಗೆ ವೀಸಾ ಸೌಲಭ್ಯವನ್ನು ರದ್ದುಗೊಳಿಸುವಂಥ ರಾಜತಾಂತ್ರಿಕ ಕ್ರಮಗಳನ್ನೂ ಕೈಗೊಂಡಿದೆ.
ನೀರು ತಡೆಯಲು ಕೇಂದ್ರ ಮಾಡಿಕೊಳ್ಳಬೇಕಾದ ಯೋಜನೆಗಳು
ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಗಣನೀಯವಾಗಿ ಏಕಾಏಕಿ ಕಡಿಮೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಭಾರತವು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಈಗಾಗಲೇ ಕೆಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು, ಈ ಕೆಳಗಿನ ಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ:
ಬೃಹತ್ ಜಲಾಶಯಗಳ ನಿರ್ಮಾಣ: ಪಶ್ಚಿಮದ ನದಿಗಳಾದ ಸಿಂಧೂ, ಝೇಲಂ, ಮತ್ತು ಚೇನಾಬ್ನ ಮೇಲೆ ದೊಡ್ಡ ಮೊತ್ತದ ನೀರು ಸಂಗ್ರಹಿಸುವಂಥ ಸಾಮರ್ಥ್ಯವಿರುವ ಜಲಾಶಯಗಳನ್ನು ನಿರ್ಮಿಸುವುದು. ಇದರಿಂದ ಭಾರತವು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ನಿಯಂತ್ರಿಸಬಹುದು. ಬರಗಾಲ ಅಥವಾ ಬೇಸಗೆ ಸಮಯದಲ್ಲಿ ಪಾಕಿಸ್ತಾನಕ್ಕೆ ನೀರಿನ ಕೊರತೆ ಉಂಟಾಗುವಂತೆ ಮಾಡಬಹುದು.
ನೀರಿನ ಪಥ ಬದಿಲಿಸುವ ಟನಲ್ಗಳು: ಒಪ್ಪಂದದ ಸಮಯದಲ್ಲಿ ಪ್ರಸ್ತಾಪಿತವಾಗಿದ್ದ ಮಾರ್ಹು ಟನಲ್ನಂತಹ ನೀರಿನ ಪಥ ಬದಲಿಸುವಂಥ ಟನಲ್ಗಳನ್ನು ನಿರ್ಮಿಸುವುದು. ಇದರಿಂದ ಚೇನಾಬ್ ನದಿಯ ನೀರನ್ನು ಪೂರ್ವದ ನದಿಗಳಾದ ರಾವಿ ಮತ್ತು ಬಿಯಾಸ್ಗೆ ತಿರುಗಿಸಬಹುದು. ಇದರಿಂದ ಭಾರತದ ಕೃಷಿ ಮತ್ತು ಜಲವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ನೀರು ಲಭ್ಯವಾದಂತಾಗುತ್ತದೆ. ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಕಡಿತಗೊಳಿಸಿದಂತೆಯೂ ಆಗುತ್ತದೆ.
ಕಿಶನಗಂಗಾ ಜಲಾಶಯದ ಹೂಳೆತ್ತುವಿಕೆ ಮತ್ತು ಫ್ಲಶಿಂಗ್: ಕಿಶನಗಂಗಾ ಜಲಾಶಯದ ಹೂಳೆತ್ತುವಿಕೆ ಮತ್ತು ಫ್ಲಶಿಂಗ್ನಂತಹ ಕಾರ್ಯಗಳನ್ನು ಮಾಡುವುದು. ಒಪ್ಪಂದದ ಷರತ್ತುಗಳ ಪ್ರಕಾರ, ಇಂತಹ ಕೆಲಸಗಳನ್ನು ಮುಂಗಾರು ಸಂದರ್ಭದಲ್ಲೇ ಮಾಡಬೇಕು. ಆದರೆ ಒಪ್ಪಂದವು ಅಮಾನತುಗೊಂಡಿರುವ ಕಾರಣ ಭಾರತವು ಇದನ್ನು ಪಾಕಿಸ್ತಾನದಲ್ಲಿ ಬಿತ್ತನೆ ಕಾರ್ಯ ಆರಂಭವಾಗುವ ಸಮಯದಲ್ಲಿ ಮಾಡಬಹುದು, ಈ ಮೂಲಕ ಪಾಕಿಸ್ತಾನದ ಕೃಷಿ ಚಟುವಟಿಕೆಗಳಿಗೆ ಹಾನಿ ಉಂಟುಮಾಡಬಹುದು.
ತ್ರಿಮಾರ್ಗದ ಯೋಜನೆ: ಜಲಾಶಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಹೊಸ ಅಣೆಕಟ್ಟುಗಳ ನಿರ್ಮಾಣ ಮತ್ತು ನೀರಿನ ಶೇಖರಣೆಯನ್ನು ಸುಧಾರಿಸುವಂಥ ಮೂರು ಯೋಜನೆಗಳನ್ನು ಭಾರತವು ಅಲ್ಪಾವಧಿ, ಮಧ್ಯಮಾವಧಿ, ಮತ್ತು ದೀರ್ಘಕಾಲೀನ ಯೋಜನೆಗಳಾಗಿ ರೂಪಿಸುವ ಬಗ್ಗೆ ಸಚಿವರ ಮಟ್ಟದಲ್ಲಿ ಚರ್ಚೆಯೂ ನಡೆದಿದೆ.
ಪೂರ್ವದ ನದಿಗಳ ಸಂಪೂರ್ಣ ಬಳಕೆ: ಭಾರತವು ರಾವಿ, ಬಿಯಾಸ್, ಮತ್ತು ಸಟ್ಲೆಜ್ ನದಿಗಳಿಂದ ತನ್ನ 33 ಮಿಲಿಯನ್ ಎಕರ್-ಫೀಟ್ (MAF) ನೀರಿನ ಭಾಗವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ಶಾಹಪುರಕಂಡಿ ಡ್ಯಾಮ್ (2024ರಲ್ಲಿ ಪೂರ್ಣಗೊಂಡಿದೆ), ಮಕೌರಾ ಪಟ್ಟನ್ ಬ್ಯಾರೇಜ್, ಮತ್ತು ಉಝ್ ಡ್ಯಾಮ್ ಯೋಜನೆಗಳು ಈ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಾವಿರಾರು ಕಿಲೋಮೀಟರ್ ಹರಿಯುವ ಸಿಂಧೂ ನೀರನ್ನು ತಡೆಯುವ ಸಾಮರ್ಥ್ಯ ಭಾರತಕ್ಕಿದೆಯೇ?
ಸಿಂಧೂ ನದಿಯು ಚೀನಾದ ಟಿಬೆಟ್ನಿಂದ ಉಗಮವಾಗಿ, ಜಮ್ಮು ಮತ್ತು ಕಾಶ್ಮೀರದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತದೆ. ಕೊನೆಗೆ ಅದು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು 3,180 ಕಿಲೋಮೀಟರ್. ಇದರ ಜೊತೆಗೆ ಝೇಲಂ, ಚೇನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ಸಿಂಧೂ ನದಿಯ ಉಪನದಿಗಳಾಗಿವೆ. ಪಾಕಿಸ್ತಾನಕ್ಕೆ ಈ ನದಿಗಳಿಂದ ವಾರ್ಷಿಕವಾಗಿ 135 ಮಿಲಿಯನ್ ಎಕರ್-ಫೀಟ್ (MAF) ನೀರು ಲಭ್ಯವಾಗುತ್ತದೆ.
ದೇಶದ ಒಟ್ಟು ನೀರಿನ ಅಗತ್ಯತೆಯ 80% ನಷ್ಟನ್ನು ಇದು ಒದಗಿಸುತ್ತದೆ. ಭಾರತದ ಪ್ರಸ್ತುತ ಜಲಾಶಯಗಳು ದೊಡ್ಡ ಪ್ರಮಾಣದ ನೀರನ್ನು ಶೇಖರಿಸಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿಲ್ಲ. ಕಿಶನಗಂಗಾ ಮತ್ತು ರತ್ಲೆ ಜಲವಿದ್ಯುತ್ ಯೋಜನೆಗಳಿಂದ ನೀರಿನ ಹರಿವನ್ನು ಗಣನೀಯವಾಗಿ ತಡೆಯಲು ಸಾಧ್ಯವಿಲ್ಲ. ಅಲ್ಲದೆ ಸಿಂಧೂ ಮತ್ತು ಅದರ ಉಪನದಿಗಳು ಎತ್ತರದ ಹಿಮಾಲಯದ ಪ್ರದೇಶಗಳಲ್ಲಿ ಹರಿಯುತ್ತವೆ. ಈ ಪ್ರದೇಶಗಳಲ್ಲಿ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸ.
ವೆಚ್ಚವೂ ಅಧಿಕ. ಬೃಹತ್ ಶೇಖರಣಾ ಸಾಮರ್ಥ್ಯವಿರುವ ಜಲಾಶಯಗಳನ್ನು ನಿರ್ಮಿಸಲು ಕನಿಷ್ಠ 5-10 ವರ್ಷಗಳ ಸಮಯ ಹಿಡಿಯುತ್ತದೆ. ಹೀಗಾಗಿ, ತಕ್ಷಣವೇ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಸಂಪೂರ್ಣವಾಗಿ ತಡೆಯಲು ಭಾರತಕ್ಕೆ ಸಾಧ್ಯವಿಲ್ಲ.
ಜಲ ಯುದ್ಧ ಎಂದರೇನು? ಅದು ಹೇಗೆ ನಡೆಯುತ್ತದೆ?
ಎರಡು ದೇಶಗಳು ಅಥವಾ ಅದಕ್ಕಿಂತ ಹೆಚ್ಚಿನ ದೇಶಗಳ ನಡುವೆ ಜಲ ಸಂಪನ್ಮೂಲಗಳಿಗಾಗಿ ಉಂಟಾಗುವ ಘರ್ಷಣೆ ಅಥವಾ ಸಮರವನ್ನು ಜಲಯುದ್ಧ ಎನ್ನುತ್ತಾರೆ. ಇದನ್ನು ರಾಜತಾಂತ್ರಿಕ, ಆರ್ಥಿಕ ಅಥವಾ ಸೇನಾ ಕ್ರಮಗಳ ಮೂಲಕ ಮಾಡಬಹುದು. ಎರಡೂ ದೇಶಗಳ ಕೃಷಿ, ಆರ್ಥಿಕತೆ ಮತ್ತು ಜನಜೀವನಕ್ಕೆ ನಿರ್ಣಾಯಕವಾಗಿರುವಂಥ ಸಿಂಧೂ ನದಿ ನೀರು ಹಂಚಿಕೆಯ ವಿಚಾರದಲ್ಲಿ ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಘರ್ಷಣೆಯು ಮುಂದೆ ಗಂಭೀರ ಪ್ರಮಾಣದ ಜಲ ಯುದ್ಧವಾಗಿ ಮಾರ್ಪಾಡಾಗುವ ಸಾಧ್ಯತೆಯೂ ಇದೆ.
ನೀರಿನ ಯುದ್ಧದ ಸ್ವರೂಪ:
ನೀರಿನ ತಡೆಯುವಿಕೆ: ಭಾರತವು ತನ್ನ ಜಲಾಶಯಗಳಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುವುದು ಅಥವಾ ನೀರಿನ ಹರಿವಿನ ದಿಕ್ಕು ಬದಲಾಯಿಸಿದರೆ, ಪಾಕಿಸ್ತಾನದಲ್ಲಿ ನೀರು ಬತ್ತಿ ಹೋಗುವಂಥ ಸ್ಥಿತಿ ಬರಬಹುದು. ಇದರಿಂದ ಕೃಷಿಯ ಉತ್ಪಾದನೆ ಕಡಿಮೆಯಾಗಿ, ಆಹಾರ ಕೊರತೆ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು.
ವಾಟರ್ ಬಾಂಬ್ (Water Bomb): ಯಾವುದೇ ಮುನ್ಸೂಚನೆ ನೀಡದೇ ಭಾರತವು ತನ್ನ ಜಲಾಶಯಗಳಿಂದ ದಿಢೀರನೆ ನೀರನ್ನು ಬಿಡುಗಡೆ ಮಾಡಬಹುದು. ಆ ಮೂಲಕ ಪಾಕಿಸ್ತಾನದಲ್ಲಿ ಪ್ರವಾಹ ಉಂಟುಮಾಡಬಹುದು. ಆದರೆ, ತಜ್ಞರ ಪ್ರಕಾರ, ಭಾರತವೇನಾದರೂ ಈ ರೀತಿ ಮಾಡಲು ಮುಂದಾದರೆ ಭಾರತಕ್ಕೇ ಅಪಾಯ ಜಾಸ್ತಿ. ಏಕೆಂದರೆ ಇದು ಭಾರತದ ಭೂಪ್ರದೇಶದಲ್ಲಿಯೂ ಪ್ರವಾಹಕ್ಕೆ ಕಾರಣವಾಗಬಹುದು.
ರಾಜತಾಂತ್ರಿಕ ಒತ್ತಡ: ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ತರುವುದು. ಸಿಂಧೂ ಜಲ ಒಪ್ಪಂದದ ಅಮಾನತಿನ ಮೂಲಕ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.
ಚೀನಾದ ಪಾತ್ರ: ಪಾಕಿಸ್ತಾನವು ಚೀನಾದ ಮಿತ್ರರಾಷ್ಟ್ರ. ಶತ್ರುವಿನ ಶತ್ರು ಮಿತ್ರ ಎಂಬಂತೆ ಪಾಕ್ ಮತ್ತು ಚೀನಾ ಒಂದಾಗಿ ಭಾರತದ ಮೇಲೆ ಜಲ ಪ್ರಹಾರ ನಡೆಸಬಹುದು. ಸಿಂಧೂ ನದಿಯ ಉಗಮವು ಚೀನಾದ ಟಿಬೆಟ್ನಲ್ಲಿದೆ.
ಒಂದು ವೇಳೆ ಭಾರತವು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆದರೆ, ಚೀನಾವು ಬ್ರಹ್ಮಪುತ್ರ ನದಿಯ ಮೇಲಿನ ತನ್ನ ಡ್ಯಾಮ್ಗಳ ಮೂಲಕ ಭಾರತಕ್ಕೆ ನೀರಿನ ಕೊರತೆಯನ್ನು ಉಂಟುಮಾಡಬಹುದು. ಇದು ಪ್ರಾದೇಶಿಕ ಜಲ-ರಾಜಕೀಯವನ್ನು ಜಟಿಲಗೊಳಿಸಿ, ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಬಹುದು.