ನವದೆಹಲಿ: ಯುನೆಸ್ಕೋದ ಜಾಗತಿಕ ಸ್ಮರಣಾ ನೋಂದಣಿ(ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್)ನಲ್ಲಿ ಈಗ ಶ್ರೀಮದ್ ಭಗವದ್ಗೀತೆ ಮತ್ತು ಭರತ ಮುನಿಗಳ ನಾಟ್ಯಶಾಸ್ತ್ರವನ್ನು ಸೇರ್ಪಡೆಗೊಳಿಸಲಾಗಿದೆ. ವಿಶೇಷ ಮೌಲ್ಯವಿರುವ ದಾಖಲೆ ಪರಂಪರೆಯನ್ನು ಸಂರಕ್ಷಿಸುವ ಜಾಗತಿಕ ಉಪಕ್ರಮದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಸಾಧನೆಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, “ವಿಶ್ವದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ! ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ನಲ್ಲಿ ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವನ್ನು ಸೇರಿಸಿರುವುದು ನಮ್ಮ ಕಾಲಾತೀತ ಜ್ಞಾನ ಮತ್ತು ಶ್ರೀಮಂತ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿದೆ. ಅವುಗಳ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ” ಎಂದು ಬರೆದುಕೊಂಡಿದ್ದಾರೆ.
ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ ತಲೆಮಾರುಗಳಾದ್ಯಂತ ಸಮಾಜಗಳ ಮೇಲೆ ಪ್ರಭಾವ ಬೀರಿದ ಪ್ರಮುಖ ಐತಿಹಾಸಿಕ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಭಗವಾನ್ ಕೃಷ್ಣ ಮತ್ತು ಅರ್ಜುನರ ನಡುವಿನ ಪವಿತ್ರ ಸಂವಾದವಾದ ಭಗವದ್ಗೀತೆಯನ್ನು ಬಹಳ ಹಿಂದಿನಿಂದಲೂ ಆಧ್ಯಾತ್ಮಿಕ ಮತ್ತು ತಾತ್ವಿಕ ಮೂಲಾಧಾರವೆಂದು ಪರಿಗಣಿಸಲಾಗಿದೆ.
ಏತನ್ಮಧ್ಯೆ, ಪ್ರಾಚೀನ ಋಷಿ ಭರತ ಮುನಿ ಬರೆದ ನಾಟ್ಯಶಾಸ್ತ್ರವನ್ನು ಪ್ರದರ್ಶನ ಕಲೆಗಳ, ವಿಶೇಷವಾಗಿ ರಂಗಭೂಮಿ, ನೃತ್ಯ ಮತ್ತು ಸಂಗೀತದ ಅಡಿಪಾಯ ಪಠ್ಯವೆಂದು ಪರಿಗಣಿಸಲಾಗಿದೆ.
ಭಗವದ್ಗೀತೆಯ ಬಗ್ಗೆ
18 ಅಧ್ಯಾಯಗಳಲ್ಲಿ 700 ಶ್ಲೋಕಗಳನ್ನು ಒಳಗೊಂಡಿರುವ ಭಗವದ್ಗೀತೆಯು ಮಹಾಭಾರತದ ಭೀಷ್ಮಪರ್ವದಲ್ಲಿ (ಅಧ್ಯಾಯ 23-40) ಹುದುಗಿದೆ. ಇದು ಶ್ರೀಕೃಷ್ಣ ಮತ್ತು ಅರ್ಜುನರ ನಡುವಿನ ಸಂಭಾಷಣೆಯ ರೂಪವನ್ನು ಹೊಂದಿದೆ. ಭಗವದ್ಗೀತೆಯನ್ನು ಪ್ರಪಂಚದಾದ್ಯಂತ ಶತಮಾನಗಳಿಂದ ಪಠಿಸಲಾಗುತ್ತಿದೆ ಮತ್ತು ಅದನ್ನು ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ.
ನಾಟ್ಯಶಾಸ್ತ್ರದ ಬಗ್ಗೆ
ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಸಂರಕ್ಷಿಸಲ್ಪಟ್ಟಿರುವ ಮತ್ತು ಕ್ರಿ.ಪೂ. 2 ನೇ ಶತಮಾನದಲ್ಲಿ ಕ್ರೋಡೀಕರಿಸಲಾಗಿದೆ ಎಂದು ನಂಬಲಾದ ಭರತಮುನಿಯ ನಾಟ್ಯಶಾಸ್ತ್ರವನ್ನು ನಾಟ್ಯವೇದದ ಸಾರವೆಂದು ಪರಿಗಣಿಸಲಾಗಿದೆ. ಇದು 36,000 ಶ್ಲೋಕಗಳನ್ನು ಒಳಗೊಂಡಿರುವ ಪ್ರದರ್ಶನ ಕಲೆಗಳ ಮೌಖಿಕ ಸಂಪ್ರದಾಯವಾಗಿದೆ. ಇದನ್ನು ಗಂಧರ್ವವೇದ ಎಂದೂ ಕರೆಯಲಾಗುತ್ತದೆ.
ಈ ಪ್ರಾಚೀನ ಪಠ್ಯವು ನಾಟ್ಯ (ನಾಟಕ), ಅಭಿನಯ (ಪ್ರದರ್ಶನ), ರಸ (ಸೌಂದರ್ಯದ ಸಾರ), ಭಾವ (ಭಾವನೆ) ಮತ್ತು ಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಗೆ ವಿಸ್ತಾರವಾದ ಚೌಕಟ್ಟನ್ನು ಒದಗಿಸಿದೆ.
ಇದು ಭಾರತೀಯ ರಂಗಭೂಮಿ, ಕಾವ್ಯಶಾಸ್ತ್ರ, ಸೌಂದರ್ಯಶಾಸ್ತ್ರ, ನೃತ್ಯ ಮತ್ತು ಸಂಗೀತಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. “ರಸವಿಲ್ಲದೆ ಯಾವುದೇ ಅರ್ಥವು ಅರಳಲು ಸಾಧ್ಯವಿಲ್ಲ” ಎಂಬ ಭರತಮುನಿಯ ಪ್ರತಿಪಾದನೆಯು ನಾಟ್ಯಶಾಸ್ತ್ರದ ಅತ್ಯಂತ ಮಹತ್ವದ ಘೋಷಣೆಗಳಲ್ಲಿ ಒಂದಾಗಿದೆ. ಇದು ಜಾಗತಿಕ ಸಾಹಿತ್ಯ ಮತ್ತು ಕಲೆಯ ಮೇಲೆ ಪ್ರಭಾವ ಬೀರುವ ಕಾಲಾತೀತ ಒಳನೋಟವಾಗಿದೆ.