ಮುಂಬೈ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ನಿರಂತರ ಬೆದರಿಕೆ ಎದುರಿಸುತ್ತಿದ್ದ ಬಾಲಿವುಡ್ನ ನಟ ಸಲ್ಮಾನ್ ಖಾನ್ಗೆ ಕೆಲವು ತಿಂಗಳ ಬಳಿಕ ಈಗ ಮತ್ತೆ ಜೀವ ಬೆದರಿಕೆ ಕರೆ(Salman Khan Death Threat) ಬಂದಿದೆ.
ಮುಂಬೈ ಟ್ರಾಫಿಕ್ ಪೊಲೀಸ್ರ ವಾಟ್ಸ್ ಆಪ್ ಸಹಾಯವಾಣಿಗೆ ಅನಾಮಧೇಯ ಸಂದೇಶವೊಂದು ಬಂದಿದ್ದು, ಈ ಸಂದೇಶದಲ್ಲಿ “ಸಲ್ಮಾನ್ ಖಾನ್ ಅವರ ಮನೆಗೆ ದಾಳಿ ಮಾಡುವ ಅಥವಾ ಅವರ ಕಾರನ್ನು ಸ್ಫೋಟಿಸುವ” ಬೆದರಿಕೆ ಒಡ್ಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಭಾರತೀಯ ನ್ಯಾಯ ಸಂಹಿತೆಯನ್ವಯ ಕ್ರಿಮಿನಲ್ ಬೆದರಿಕೆ ಕೇಸು ದಾಖಲಿಸಿದ್ದಾರೆ.
ಮುಂಬೈನ ವರ್ಲಿಯಲ್ಲಿರುವ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಏಪ್ರಿಲ್ 13ರ ರಾತ್ರಿ ಈ ಬೆದರಿಕೆ ಸಂದೇಶ ಬಂದಿದೆ. “ನಾವು ಸಲ್ಮಾನ್ ಖಾನ್ರ ಮನೆಯ ಒಳಗೆ ನುಗ್ಗಿ ಅವರನ್ನು ಕೊಲೆ ಮಾಡುತ್ತೇವೆ, ಇಲ್ಲವೇ ಅವರ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸುತ್ತೇವೆ, ಎಚ್ಚರ” ಎಂದು ಆ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಇದರಲ್ಲಿ ಯಾವುದೇ ವಿಶಿಷ್ಟ ಹಣಕಾಸಿನ ಬೇಡಿಕೆ ಹಾಕಿಲ್ಲ. ಇದನ್ನು ಗಂಭೀರ ಬೆದರಿಕೆ ಎಂದು ಪರಿಗಣಿಸಿರುವ ಪೊಲೀಸರು, ಅನಾಮಧೇಯ ಸಂದೇಶದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತಾಂತ್ರಿಕ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಘಟನೆಯ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವ ಮುಂಬೈ ಪೊಲೀಸರು, ವರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಂದೇಶ ಕಳುಹಿಸಿದ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್ರ ಸುರಕ್ಷತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈಗಾಗಲೇ Y+ ಶ್ರೇಣಿಯ ಸುರಕ್ಷತೆಯನ್ನು ಹೊಂದಿರುವ ಸಲ್ಮಾನ್ಗೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒದಗಿಸಲಾಗುತ್ತಿದೆ.
ಸರಣಿ ಬೆದರಿಕೆಗಳು
ಸಲ್ಮಾನ್ ಖಾನ್ಗೆ ಇದು ಮೊದಲ ಬೆದರಿಕೆಯೇನಲ್ಲ. ಅವರಿಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಿಂದ ಪದೇ ಪದೇ ಬೆದರಿಕೆಗಳು ಬರುತ್ತಲೇ ಇವೆ. ಕಳೆದ ವರ್ಷದ ಏಪ್ರಿಲ್ನಲ್ಲಿ, ಲಾರೆನ್ಸ್ನ ಸಹೋದರ ಅನ್ಮೋಲ್ ಬಿಷ್ಣೋಯಿ, ಸಲ್ಮಾನ್ರ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನ ಹೊರಗೆ ಗುಂಡಿನ ದಾಳಿ ನಡೆಸಿದ್ದ. ಬಳಿಕ ಅದರ ಹೊಣೆಯನ್ನು ಸಾಮಾಜಿಕ ಜಾಲತಾಣದ ಮೂಲಕ ತಾನೇ ಹೊತ್ತುಕೊಂಡಿದ್ದ. ಈ ಘಟನೆಯ ಬಳಿಕ ಸಲ್ಮಾನ್ರ ಸುರಕ್ಷತೆಯನ್ನು Y+ ಶ್ರೇಣಿಗೆ ಏರಿಸಲಾಯಿತು. ಅಲ್ಲದೆ, 2024ರ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ₹2 ಕೋಟಿ, ₹5 ಕೋಟಿಗಳ ಬೇಡಿಕೆಯೊಂದಿಗೆ ಹಲವಾರು ಬೆದರಿಕೆ ಸಂದೇಶಗಳು ಸಲ್ಲುಗೆ ಬಂದಿದ್ದವು.
ಈ ಎಲ್ಲ ಬೆದರಿಕೆಗಳ ಹೊರತಾಗಿಯೂ, ಸಲ್ಮಾನ್ ಖಾನ್ ತಮ್ಮ ವೃತ್ತಿಪರ ಜೀವನವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ತಮ್ಮ ‘ಸಿಕಂದರ್’ ಚಿತ್ರದ ಪ್ರಚಾರದ ವೇಳೆ ಸುದ್ದಿಗಾರರು ಬೆದರಿಕೆ ಕುರಿತು ಕೇಳಿದಾಗ ಸಲ್ಲು, “ಎಲ್ಲವೂ ದೇವರಿಚ್ಛೆಯಂತೆ ನಡೆಯುತ್ತದೆ, ಜೀವನದಲ್ಲಿ ಏನು ಬರಬೇಕೋ ಅದು ಬರುತ್ತದೆ. ಆಯಸ್ಸು ಇರುವಷ್ಟು ದಿನ ಬದುಕುತ್ತೇನೆ” ಎಂದು ಹೇಳಿದ್ದರು.