ಅಮರಾವತಿ: ಅಖಂಡ ತೆಲುಗುನಾಡು ಇಬ್ಬಾಗವಾಗುತ್ತಿದ್ದಂತೆ ಆಂಧ್ರ ಪ್ರದೇಶಕ್ಕೆ ಹೊಸ ರಾಜಧಾನಿ ಅಭಾವ ಎದುರಾಗಿತ್ತು. ಹೀಗಾಗಿ ಅಂದಿನ ಸಿಎಂ ಚಂದ್ರಬಾಬು ನಾಯ್ಡು ನೂತನ ರಾಜಧಾನಿ ಕಟ್ಟುವ ಸಂಕಲ್ಪ ಮಾಡಿದರು. ಇದರ ಅಂಗವಾಗಿಯೇ ತಲೆ ಎತ್ತಿದ್ದು ಅಮರಾವತಿ. ಆದರೆ, ಮುಂದಿನ ದಿನಗಳಲ್ಲಿ ಈ ಅಮರಾವತಿ ನಿರ್ಮಾಣವೇ ರಾಜಕೀಯ ಚರ್ಚಾ ವಿಷಯವಾಗಿದ್ದಲ್ಲದೆ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಚಂದ್ರಬಾಬು ನಡುವೆ ಸಮರಕ್ಕೂ ನಾಂದಿ ಹಾಡಿದ್ದು ಸುಳ್ಳಲ್ಲ. ಆದರೀಗ ಆಂಧ್ರದಲ್ಲಿ ಮತ್ತೆ ರಾಜಕೀಯ ಚಿತ್ರಣ ಬದಲಾಗಿದೆ. ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಪಟ್ಟಕ್ಕೇರಿದ್ದಾರೆ. ಹೀಗಾಗಿ ಅಮರಾವತಿಯನ್ನು ಸೃಷ್ಠಿಸುವ ಅವರ ಕನಸಿಗೆ ಮತ್ತೆ ರೆಕ್ಕೆ ಬಂದಿದೆ. ಇದರ ಮೊದಲ ಹೆಜ್ಜೆ ಎನ್ನುವಂತೀಗ ನೂತನ ರಾಜಧಾನಿಯಲ್ಲಿ ನಾಯ್ಡು ಹೊಸ ಮನೆ ಕಟ್ಟುತ್ತಿದ್ದಾರೆ.
5.2 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಹೊಸ ಬಂಗಲೆ ನಿರ್ಮಾಣ
ಹೌದು…ಅಮರಾವತಿಯ 5.6 ಎಕರೆ ಜಮೀನನ್ನು ನಾಯ್ಡು ಕಳೆದ ವರ್ಷವೇ ಖರೀದಿಸಿದ್ದಾರೆ. ಮೂರು ರೈತರಿಂದ ಭೂಮಿ ಖರೀದಿಸಿದ್ದ ನಾಯ್ಡು ಇದೀಗ ಅಲ್ಲಿ ಮನೆ ಕಟ್ಟುವ ಕಾಯಕ ಆರಂಭಿಸಿದ್ದಾರೆ. 2500 ಚದುರಡಿ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ನಿನ್ನೆ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪತ್ನಿ ಭುವನೇಶ್ವರಿ ಹಾಗೂ ಪುತ್ರ ನಾರಾ ಲೋಕೇಶ್ ಜೊತೆ ಸೇರಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ್ದಾರೆ.
ಎರಡಂತಸ್ತಿನ ಭವ್ಯ ಬಂಗಲೆ, ಹೈಟೆಕ್ ಕ್ಯಾಂಪ್ ಆಫೀಸ್
ನಾಯ್ಡು ಹೊಸ ಮನೆ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ. ಅಮರಾವತಿ ಮನೆ ಹೈಟೆಕ್ ವ್ಯವಸ್ಥೆಗಳಿಂದ ರೂಪಗೊಳ್ಳಲಿದೆ. ಎರಡಂತಸ್ತಿನ ಭವ್ಯ ಬಂಗಲೆ ಇದಾಗಿದ್ದು, ಅತ್ಯಾಧುನಿಕ ಗೃಹ ಕಚೇರಿಯೂ ನಿರ್ಮಾಣವಾಗಲಿದೆ. ಈ ಹಿಂದೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಾಸವಿದ್ದ ಮನೆ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮನೆಗಳಿಗಿಂತಲೂ ಈ ಬಂಗಲೆ ದೊಡ್ಡದು. ಆ ಮನೆಗಳು ಸರ್ಕಾರ ಸ್ವತ್ತಾಗಿದ್ದು, ನಾಯ್ಡು ಅವರದ್ದು ಸ್ವಂತ ಮನೆ ಎನ್ನುವುದು ವಿಶೇಷ. ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಗೃಹ ಕಚೇರಿಯನ್ನು ರೂಪಿಸಲಾಗ್ತಿದೆ. ಜೊತೆಗೆ ಭದ್ರತಾ ವಿಭಾಗಕ್ಕೆಂದೇ ಒಂದಷ್ಟು ಪ್ರದೇಶವನ್ನು ಮೀಸಲಿಡಲಾಗಿದೆ. ಉಳಿದಂತೆ, ದೇಶ, ವಿದೇಶದ ಅತ್ಯಾಧುನಿಕ ಸೌಲಭ್ಯಗಳು ಈ ಬಂಗಲೆಯಲ್ಲಿ ಇರಲಿವೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ನೂತನ ಮನೆ ತಲೆ ಎತ್ತೋ ಸಾಧ್ಯತೆಗಳಿವೆ