ಲಕ್ನೋ/ಜೈಪುರ: ಮತ್ತೊಂದು ಅದ್ಧೂರಿ ಸಮಾರಂಭಕ್ಕೆ ಅಯೋಧ್ಯೆಯ ಶ್ರೀರಾಮಮಂದಿರ ಸಜ್ಜಾಗಿದೆ. ಮುಂದಿನ ತಿಂಗಳಲ್ಲೇ ರಾಮಮಂದಿರದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಉದ್ಘಾಟನೆಗೊಳ್ಳಲಿದ್ದು, ಇಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ವಿಗ್ರಹಗಳ ಕೆತ್ತನ ಕಾರ್ಯ ರಾಜಸ್ಥಾಾನದ ಜೈಪುರದಲ್ಲಿ ಭರದಿಂದ ಸಾಗುತ್ತಿದೆ. ಜೂನ್ 6ರಿಂದ ರಾಮ್ ದರ್ಬಾರ್ಗೆ ಸಾರ್ವಜನಿಕರ ಪ್ರವೇಶ ಲಭ್ಯವಾಗಲಿದೆ ಎಂದು ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಮೂಲಕ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಂತಾಗಲಿದೆ. 2020ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇವಾಲಯದ ಕೆಳ ಮಹಡಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಿತ್ತು. ಈಗ ಮಂದಿರದ ಮೊದಲ ಮಹಡಿಯಲ್ಲಿ ರಾಮ್ ದರ್ಬಾರ್ ನಿರ್ಮಾಣಗೊಳ್ಳುತ್ತಿದ್ದು, ಅಲ್ಲಿ ರಾಜಾ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಭಗವಾನ್ ಶ್ರೀರಾಮನ ಜೊತೆಗೆ ಅವರ ಸಹೋದರರು ಮತ್ತು ಸೀತಾಮಾತೆಯ ವಿಗ್ರಹಗಳನ್ನು ಮೇ 23ರಂದು ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದೂ ಮಿಶ್ರಾ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲವು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಜೂನ್ 5ರವರೆಗೂ ಮುಂದುವರಿಯಲಿದೆ. ಅದಾದ ನಂತರವೇ ರಾಮ್ ದರ್ಬಾರ್ ಅನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿಸಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

5 ಅಡಿ ಎತ್ತರದ ರಾಮನ ವಿಗ್ರಹ
ರಾಜಸ್ಥಾನದ ಜೈಪುರದಲ್ಲಿ 20ಕ್ಕೂ ಹೆಚ್ಚು ಶಿಲ್ಪಿಗಳು ಕುಶಲಕರ್ಮಿ ಪ್ರಶಾಂತ್ ಪಾಂಡೆ ಅವರ ನೇತೃತ್ವದಲ್ಲಿ ಕೆತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಶ್ರೀರಾಮನ 5 ಅಡಿ ಮೂರ್ತಿ(ರಾಜಾ ರಾಮ)ಯನ್ನು ಅಮೃತಶಿಲೆಯಲ್ಲಿ ಕೆತ್ತಲಾಗುತ್ತಿದೆ. ಇದರ ಜೊತೆಗೆ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತನ ಮೂರ್ತಿಗಳನ್ನೂ ಕೆತ್ತಲಾಗುತ್ತಿದೆ. ಈ ಮೂರ್ತಿಗಳನ್ನು ರಾಮಮಂದಿರದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಮೂರ್ತಿಗಳ ಕೆತ್ತನೆ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದೆ. ಕೆತ್ತನೆ ಪೂರ್ಣವಾದ ಬಳಿಕ ಇವುಗಳನ್ನು ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಶಿಲ್ಪಿ ಪ್ರಶಾಂತ್ ಪಾಂಡೆ, ಎಲ್ಲಾ ವಿಗ್ರಹಗಳು 36ರಿಂದ 60 ಇಂಚುಗಳಷ್ಟು ಎತ್ತರವಿರಲಿವೆ. ಕಲೆಯ ಉದ್ದೇಶದಿಂದ ನಾವು ಇದನ್ನು ಮಾಡುತ್ತಿಲ್ಲ. ಇದು ನಮ್ಮ ಜವಾಬ್ದಾರಿ. ಭಗವಾನ್ ರಾಮ ಮತ್ತವನ ಮೌಲ್ಯದ ಕಥೆಯನ್ನು ನಾವು ಬಿತ್ತರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು, ಅಯೋಧ್ಯೆಯ ರಾಮಮಂದಿರ ಸಂಕೀರ್ಣದ ಹೊರಗೆ ತಲೆಎತ್ತಲಿರುವ ಮಹರ್ಷಿ ವಾಲ್ಮೀಕಿ ಸೇರಿದಂತೆ ಇತರೆ 6 ದೇಗುಲಗಳ ನಿರ್ಮಾಣವೂ ಭರದಿಂದ ಸಾಗಿದ್ದು, ಅವುಗಳೂ ಜೂನ್ 6ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.