ರಾಯ್ಪುರ: ಆರು ವರ್ಷದ ಬಾಲಕಿಯ ಮೇಲೆ ಆಕೆಯ 24 ವರ್ಷದ ಚಿಕ್ಕಪ್ಪನೇ ಅತ್ಯಾಚಾರವೆಸಗಿ, ಆಕೆಯನ್ನು ಕೊಂದು, ಶವವನ್ನು ಕಾರೊಂದರ ಟ್ರಂಕ್ನಲ್ಲಿ ಹಾಕಿ ಲಾಕ್ ಮಾಡಿಟ್ಟ ಆಘಾತಕಾರಿ ಘಟನೆ ನಡೆದಿದೆ. ಛತ್ತೀಸ್ಗಢದ ದುರ್ಗ್ನಲ್ಲಿ ಈ ಅಮಾನವೀಯ ಕೃತ್ಯ(Rape-Murder) ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವರಾತ್ರಿ ಉತ್ಸವದ ಅಂಗವಾಗಿ ಉತ್ತರ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸಂಬಂಧಿಸಿ ಕನ್ಯಾ ಭೋಜ್ ಎಂಬ ಪದ್ಧತಿಯನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು 6 ವರ್ಷದ ಬಾಲಕಿಯು ತನ್ನ ಅಜ್ಜಿಯ ಮನೆಗೆ ಹೋಗಿದ್ದಳು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಕಿ ನಂತರದಲ್ಲಿ ಕಾಣೆಯಾಗಿದ್ದಳು. ಮನೆಗೂ ಮರಳಿರಲಿಲ್ಲ. ಆಕೆಗಾಗಿ ಎಲ್ಲ ಕಡೆ ಹುಡುಕಾಡಿದ ಪೋಷಕರು, ಏಪ್ರಿಲ್ 5 ರಂದು ಮಗು ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು.
ಬಾಲಕಿಯ ಅಜ್ಜಿ ಮತ್ತು ಇನ್ನೊಬ್ಬ ಸಂಬಂಧಿಯು ಆಕೆಯನ್ನು ಮನೆಯಲ್ಲೇ ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಸೋಮೇಶ್ ಯಾದವ್ ಮನೆಯಲ್ಲಿ ಒಬ್ಬನೇ ಇದ್ದ. ಈತನೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ ಮಾಡಿ ನಂತರ ಶವವನ್ನು ನೆರೆಮನೆಯ ಕಾರಿನ ಟ್ರಂಕ್ ನೊಳಗೆ ಇರಿಸಿದ್ದ ಎಂದು ದುರ್ಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋಡ್ ತಿಳಿಸಿದ್ದಾರೆ.
ನೆರೆಮನೆಯ ಕಾರು ಅಲ್ಲೇ ಯಾವತ್ತೂ ಪಾರ್ಕ್ ಮಾಡಲಾಗುತ್ತಿತ್ತು ಮತ್ತು ಅದರ ಒಂದು ಡೋರ್ ಅನ್ ಲಾಕ್ ಆಗಿರುವುದು ಆರೋಪಿಗೆ ಮೊದಲೇ ತಿಳಿದಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿ ಯಾದವ್ ಮಾತ್ರವಲ್ಲದೇ ಕಾರಿನ ಮಾಲೀಕ ಮತ್ತು ಇನ್ನೊಬ್ಬ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಕೃತ್ಯದಲ್ಲಿ ಮತ್ತಿಬ್ಬರ ಪಾತ್ರ ಇಲ್ಲ ಎನ್ನುವುದು ದೃಢಪಟ್ಟ ಕಾರಣ ಅವರನ್ನು ವಿಚಾರಣೆ ನಂತರ ವಾಪಸ್ ಕಳುಹಿಸಲಾಯಿತು ಎಂದು ಎಎಸ್ಪಿ ತಿಳಿಸಿದ್ದಾರೆ.
“ದೂರು ಬಂದ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಿದಾಗ ಪೊಲೀಸರಿಗೆ ನೆರೆಮನೆಯ ಕಾರಿನೊಳಗೆ ಬಾಲಕಿಯ ಶವ ಸಿಕ್ಕಿತ್ತು. ಆಕೆಯ ದೇಹದಲ್ಲಿ ಗಾಯದ ಗುರುತುಗಳಿದ್ದು, ವೈದ್ಯಕೀಯ ವರದಿಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ” ಎಂದು ರಾಥೋಡ್ ಹೇಳಿದರು.
ತೀವ್ರ ತನಿಖೆ ನಡೆಸಿದಾಗ ಬಾಲಕಿಯ ಚಿಕ್ಕಪ್ಪನೇ ಅಪರಾಧವೆಸಗಿರುವುದು ಬೆಳಕಿಗೆ ಬಂದಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ರಾಥೋಡ್ ಹೇಳಿದರು. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದೂ ಅವರು ತಿಳಿಸಿದರು. ಆರೋಪಿಯ ವಿರುದ್ಧ ಅತ್ಯಾಚಾರ, ಕೊಲೆ, ಅಪಹರಣ ಮತ್ತು ಇತರೆ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯಿಂದ ರೊಚ್ಚಿಗೆದ್ದ ನಿವಾಸಿಗಳು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರು ಸೋಮವಾರ ಮೋಹನ್ ನಗರ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ, ಸಂತ್ರಸ್ತೆಯ ಶವವನ್ನು ಹೊತ್ತುಕೊಂಡು ಕಾನೂನು ಜಾರಿ ನಿರ್ದೇಶನಾಲಯದ ನಿರ್ಲಕ್ಷ್ಯ ಮತ್ತು ಕ್ರಮ ಕೈಗೊಳ್ಳುವಲ್ಲಿ ಆದ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಯು ಸ್ವಲ್ಪ ಹೊತ್ತಲ್ಲೇ ಹಿಂಸೆಗೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕೊನೆಗೆ ಅವರನ್ನು ಚದುರಿಸಲು ಪೊಲೀಸರು ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಈ ಘಟನೆಯನ್ನು “ಅಮಾನವೀಯ” ಎಂದು ಬಣ್ಣಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ.



















