ನವದೆಹಲಿ: ಐಪಿಎಲ್ ಸಂಸ್ಥಾಪಕ ಅಧ್ಯಕ್ಷ, ಐಪಿಎಲ್ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಆರ್ಥಿಕ ಅಪರಾಧಿ ಲಲಿತ್ ಮೋದಿಗೆ ಸಂಕಷ್ಟ ಎದುರಾಗಿದೆ. ಹಗರಣಗಳ ಕುರಿತು ಭಾರತದ ತನಿಖೆಯಿಂದ ತಪ್ಪಿಸಿಕೊಳ್ಳಲು ವನುವಾಟು ಎಂಬ ದ್ವೀಪದ ಪೌರತ್ವ ಪಡೆದಿದ್ದ ಲಲಿತ್ ಮೋದಿಯ ಪಾಸ್ ಪೋರ್ಟ್ ರದ್ದುಗೊಳಿಸಬೇಕು ಎಂದು ವನುವಾಟು ಪ್ರಧಾನಿ ಜೋಥಾಂ ನಪಾಟ್ ಆದೇಶಿಸಿದ್ದಾರೆ. ಹಾಗಾಗಿ, ಲಲಿತ್ ಮೋದಿ ಈಗ ಯಾವ ದೇಶಕ್ಕೆ ಪರಾರಿಯಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
“ಲಲಿತ್ ಮೋದಿ ಅವರ ಪಾಸ್ ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು ಎಂಬುದಾಗಿ ಆದೇಶಿಸಿದ್ದೇನೆ. ಲಲಿತ್ ಮೋದಿ ಅವರು ಪಾಸ್ ಪೋರ್ಟ್, ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾಗ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂಬುದಾಗಿ ಪ್ರಸ್ತಾಪಿಸಿದ್ದಾರೆ. ಆದರೆ, ಈಗ ಅವರು ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂಬುದಾಗಿ ಗೊತ್ತಾಗಿದೆ. ಹಾಗಾಗಿ, ಅವರ ಪೌರತ್ವವೂ ರದ್ದಾಗಲಿದೆ” ಎಂಬುದಾಗಿ ಜೋಥಾಂ ನಪಾಟ್ ಮಾಹಿತಿ ನೀಡಿದ್ದಾರೆ.
ಐಪಿಎಲ್ ಎಂಬ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಸಂಘಟಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಲಲಿತ್ ಮೋದಿ ವಿರುದ್ಧ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ, ತೆರಿಗೆ ವಂಚನೆ ಎಸಗಿದ ಪ್ರಕರಣಗಳು ದಾಖಲಾಗಿವೆ. 2010ರ ಐಪಿಎಲ್ ಫೈನಲ್ ಬಳಿಕ ಇವರನ್ನು ಬಿಸಿಸಿಐ ಐಪಿಎಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತು. ಇ.ಡಿ ಅಧಿಕಾರಿಗಳು ಇವರ ವಿರುದ್ಧ ತನಿಖೆ ನಡೆಸಲು ಮುಂದಾಯಿತು. ಕೂಡಲೇ ಲಲಿತ್ ಮೋದಿ ಭಾರತ ತೊರೆದು, ಲಂಡನ್ ಗೆ ಪರಾರಿಯಾಗಿದ್ದರು.
ವನುವಾಟು ದ್ವೀಪವೇ ಏಕೆ?
ವನುವಾಟು ದ್ವೀಪವು ಕೇವಲ 3 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 1.3 ಕೋಟಿ ರೂ. ನೀಡಿದರೆ ವನುವಾಟು ದ್ವೀಪದ ಗೋಲ್ಡನ್ ಪಾಸ್ ಪೋರ್ಟ್ ಸಿಗುತ್ತದೆ. ಅಲ್ಲಿನ ಪೌರತ್ವ ಕೂಡ ಲಭಿಸುತ್ತದೆ. ಅಲ್ಲದೆ, ವನುವಾಟು ದೇಶದಲ್ಲಿ ಎಷ್ಟೇ ದುಡಿದರೂ ತೆರಿಗೆ ಪಾವತಿಸಬೇಕಿಲ್ಲ. ಅಲ್ಲಿನ ಪೌರತ್ವ ಪಡೆದವರಿಗೆ ಗಡೀಪಾರು ನಿಯಮಗಳು ಕೂಡ ಬಿಗಿಯಾಗಿವೆ. ಹಾಗಾಗಿ, ಭಾರತದ ವಿಚಾರಣೆಯನ್ನು ತಪ್ಪಿಸಿಕೊಳ್ಳಲು ಲಲಿತ್ ಮೋದಿ ವನುವಾಟು ದ್ವೀಪದ ಪೌರತ್ವ ಪಡೆದಿದ್ದರು ಎನ್ನಲಾಗಿದೆ.



















