ಚಿತ್ರದುರ್ಗ: ಸರ್ಕಾರಿ ಕೆಲಸದ ಆಸೆಗೆ ಪತ್ನಿಯೊಬ್ಬಳು ಪತಿಯನ್ನು ಕೊಲೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಜಿಲ್ಲೆಯ ಹೊಳಲ್ಕೆರೆಯಲ್ಲಿ ಈ ಘಟನೆ ನಡೆದಿರುವ ಆರೋಪ ಕೇಳಿ ಬಂದಿದೆ. ನೆಹರು ನಗರ ನಿವಾಸಿಯಾಗಿರುವ ಸುರೇಶ್ ಕೊಲೆಯಾಗಿರುವ ವ್ಯಕ್ತಿ. ಈತನ ತಂದೆ ಸರ್ಕಾರ ಕೆಲಸದಲ್ಲಿದ್ದರು. ಅವರು ಸಾವನ್ನಪ್ಪಿದ ನಂತರ ಸುರೇಶ್ ಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಕ್ಕಿತ್ತು.
ಮೊಳಕಾಲ್ಮೂರು ತಾಲ್ಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಸುರೇಶ್, ಎಸ್ ಡಿಎ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಕಿರುಕುಳ ಹಾಗೂ ಮಾತು ಕೇಳಿ ತನ್ನ ತಾಯಿ ಹಾಗೂ ಸಹೋದರನಿಂದ ದೂರವಾಗಿದ್ದ. ಈ ವ್ಯಕ್ತಿ 2024ರ ಅಕ್ಟೋಬರ್ 8ರಂದು ಸಾವನ್ನಪ್ಪಿದ್ದ.
ಸುರೇಶ್ ಸಾವನ್ನಪ್ಪಿದ ವೇಳೆ ಜಾಂಡೀಸ್ ಇತ್ತು ಎಂದು ಆತನ ಮನೆಯವರಿಗೂ ವಿಷಯ ಮುಟ್ಟಿಸದೆ ಪತ್ನಿ ತಾನೇ ಅಂತ್ಯ ಸಂಸ್ಕಾರ ಮಾಡಿದ್ದಳು. ಈಗ ಮೃತನ ತಾಯಿ ಸರೋಜಮ್ಮ. ಸೊಸೆ ನಾಗರತ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಜಾಂಡೀಸ್ ನಿಂದ ಸತ್ತ ಎಂದು ನಾಟಕವಾಡ್ತಿದ್ದಾಳೆ. ಅವನ ಕೆಲಸ ಇವಳಿಗೆ ಬರುತ್ತದೆ ಎಂದು ಈ ಕೃತ್ಯ ಎಸಗಿದ್ದಾಳೆಂದು ಪೊಲೀಸ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಂತ್ಯಕ್ರಿಯೆ ನಡೆದ 4 ತಿಂಗಳುಗಳ ನಂತರ ಈಗ ಪೊಲೀಸರು ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ಸುರೇಶ್ ಕಳೆಬರಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.