ಮಂಡ್ಯ: ವಿಸಿ ನಾಲೆಗೆ ಕಾರು ಬಿದ್ದ ಘಟನೆ ಸೋಮವಾರ ನಡೆದಿದ್ದು, ಸದ್ಯ ಸಾವಿನ ಸಂಖ್ಯೆ 3ಕ್ಕೆ ಏರಿಕೆ ಕಂಡಿದೆ.
ಕಾರು ನಾಲೆಗೆ ಬೀಳುತ್ತಿದ್ದಂತೆ ಪೀರ್ಖಾನ್ ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಪೀರ್ಖಾನ್ ಶವ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಯಲ್ಲಿ (VC Canal) ಪತ್ತೆಯಾಗಿದೆ.
ಕತ್ತಲಾಗಿದ್ದರಿಂದಾಗಿ ಸೋಮವಾರ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ತಡರಾತ್ರಿವರೆಗೂ ಫೀರ್ ಖಾನ್ ಮತ್ತು ಅಸ್ಲಂಪಾಷಾಗಾಗಿ ಹುಡುಕಾಟ ನಡೆಸಿದರು. ನಾಲೆಯಲ್ಲಿ ನೀರು ಸ್ಥಗಿತ ಹಿನ್ನೆಲೆ ಮಂಗಳವಾರ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ನಾಲೆಯಲ್ಲಿ ಫೀರ್ ಖಾನ್ ಶವ ಪತ್ತೆಯಾಗಿದೆ
ಘಟನೆಯಲ್ಲಿ ಬದುಕುಳಿದಿರುವ ನಯಾಜ್ಗೆ ಮಂಡ್ಯ ಮಿಮ್ಸ್ (Mims) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಗೆ ತೀವ್ರ ಪೆಟ್ಟಾಗಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹುಲಿಕೆರೆ- ಶಿವಳ್ಳಿ (Hulikere-Sivalli)ಮಾರ್ಗದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಹಿಂದೆ ಇದೇ ನಾಲೆಗೆ ಕಾರು ಬಿದ್ದು ಚಾಲಕ ಲೋಕೇಶ್ ಸಾವನ್ನಪ್ಪಿದ್ದರು. ನಂತರ ಜಿಲ್ಲಾಡಳಿತ 500 ಮೀಟರ್ನಷ್ಟು ದೂರ ಮಾತ್ರ ಬ್ಯಾರಿಕೇಡ್ ಅಳವಡಿಕೆ ಮಾಡಿತು. ಇನ್ನುಳಿದ ನಾಲ್ಕು ಕಿಲೋ ಮೀಟರ್ ಬ್ಯಾರಿಕೇಡ್ ಅಳವಡಿಸಿದ್ದರೆ ಈ ಅಪಘಾತ ನಡೆಯುತ್ತಿರಲಿಲ್ಲ. ಹೀಗಾಗಿ ಕೂಡಲೇ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.