ನವದೆಹಲಿ: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದ 2025ರ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 5 ಕೋಟಿ ರೂ. ಗಳ ನಗದು ಬಹುಮಾನವನ್ನು ಪ್ರಕಟಿಸಿದೆ. ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ತಂಡ 9 ವಿಕೆಟ್ಗಳಿಂದ ಗೆಲುವು ಪಡೆದು ಆ ಮೂಲಕ ಸತತ ಎರಡನೇ ಬಾರಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. 2023ರಲ್ಲಿ ಶಫಾಲಿ ವರ್ಮಾ(Shafali Verma) ನಾಯಕತ್ವದಲ್ಲಿ ಭಾರತ ಈ ಪ್ರಶಸ್ತಿ ಗೆದ್ದಿತ್ತು.
“ಮಲೇಷ್ಯಾದಲ್ಲಿ ನಡೆದಿದ್ದ 2025ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಅಭಿನಂದನೆಗಳು. ನೀವು ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಅನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದೀರಿ. ಈ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿರುವ ಹೆಡ್ ಕೋಚ್ ನೋಸಿನ್ ಅಲ್ ಖಾದೀರ್ ಮಾರ್ಗದರ್ಶನದ ಭಾರತ ತಂಡದ ಆಟಗಾರ್ತಿಯರು ಹಾಗೂ ಸಹಾಯಕ ಸಿಬ್ಬಂದಿಗೆ 5 ಕೋಟಿ ರೂ. ಗಳನ್ನು ನಗದು ಬಹುಮಾನ ನೀಡಲಾಗುವುದು,” ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ತಂಡಕ್ಕೆ 9 ವಿಕೆಟ್ ಜಯ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 82 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತ್ತು. ಆ ಮೂಲಕ ಭಾರತ ತಂಡಕ್ಕೆ ಇದು ಆರನೇ ಗೆಲುವು . ಇದಕ್ಕೂ ಮೊದಲು, ಭಾರತ ತಂಡವು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. 2023 ರಲ್ಲಿ ಶಫಾಲಿ ವರ್ಮಾ ನಾಯಕತ್ವದಲ್ಲಿ ಭಾರತ ತಂಡವು ಈ ಟ್ರೋಫಿ ಗೆದ್ದುಕೊಂಡಿತು.
ತಂಡಕ್ಕೆ ದಿಗ್ಗಜರ ಶಹಬ್ಬಾಸ್
ಕಿರಿಯರ ಮಹಿಳಾ ತಂಡದ ಈ ಸಾಧನೆಯನ್ನು ಭಾರತ ಹಿರಿಯರ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್, ಇರ್ಫಾನ್ ಪಠಾಣ್, ರಿಷಭ್ ಪಂತ್, ಮಿಥಾಲಿ ರಾಜ್ ಸೇರಿದಂತೆ ಹಲವು ದಿಗ್ಗಜರು ಶ್ಲಾಘಿಸಿದ್ದಾರೆ. 2023ರ ಚೊಚ್ಚಲ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಶಫಾಲಿ ವರ್ಮಾ ಸಾರಥ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಅಂಡರ್ 19 ಮಹಿಳಾ ತಂಡದ ಸಾಧನೆಯನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದ್ದು, “ನಮ್ಮ ಯುವ ಆಟಗಾರ್ತಿಯರು ನಿಜಕ್ಕೂ ರೋಮಾಂಚಕ ಪ್ರದರ್ಶನ ನೀಡಿದ್ದಾರೆ. ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ,” ಎಂದು ಟ್ವೀಟ್ ಮಾಡಿ ಗುಣಗಾಣ ಮಾಡಿದ್ದಾರೆ.
ಮಿಥಾಲಿ ರಾಜ್ ಗುಣಗಾನ
“ಇದು ಸರಿಸಾಟಿಯಿಲ್ಲದ, ಅಜೇಯ ಗೆಲುವಾಗಿದೆ . ಅಂಡರ್ 19 ಮಹಿಳಾ ತಂಡವು ಕೇವಲ ಟ್ರೋಫಿ ಮಾತ್ರ ಗೆದ್ದಿಲ್ಲ, ಬದಲಿಗೆ ಪ್ರಾಬಲ್ಯ ಸಾಧಿಸಿದ್ದಾರೆ. ಇಂತಹ ಅತ್ಯದ್ಭುತ ಪ್ರದರ್ಶನ ತೋರಲು ನೆರವಾದ ಪ್ರತಿಯೊಬ್ಬ ಆಟಗಾರ್ತಿ ಹಾಗೂ ಸಿಬ್ಬಂದಿ ತಂಡವನ್ನು ಅಭಿನಂದಿಸುತ್ತೇನೆ. ನಿಮ್ಮ ಸಾಧನೆಯಿಂದ ನಮಗೆ ನಿಜಕ್ಕೂ ಹೆಮ್ಮೆಯಾಗಿದೆ. ಭಾರತ ತಂಡದಲ್ಲಿ ಸುವರ್ಣ ಯುಗ ಆರಂಭವಾಗಿದೆ,” ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಶ್ಲಾಘಿಸಿದ್ದಾರೆ.