ನವ ದೆಹಲಿ: 2025ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಖೇಲ್ ರತ್ನ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಸಾಧಕ ಕ್ರೀಡಾಪಟುಗಳಿಗೆ ನೀಡಿದರು.
ತಮಿಳುನಾಡು ಮೂಲದ ಡಿ ಗುಕೇಶ್ ಅವರ ಚೆಸ್ ಕ್ರೀಡೆಯಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ 2024ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. 2024ರಲ್ಲಿ ಸಿಂಗಾಪುರದಲ್ಲಿ ನಡೆದ ಫಿಡೆ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್, 2024ರಲ್ಲಿ ಬುಡಾಪೆಸ್ಟ್ನಲ್ಲಿ ನಡೆದ ಫಿಡೆ 45ನೇ (ಮುಕ್ತ ತಂಡ) ಚೆಸ್ ಒಲಿಂಪಿಯಾಡ್ನಲ್ಲಿ ಚಿನ್ನದ ಪದಕ ಮತ್ತು 2024ರಲ್ಲಿ ಬುಡಾಪೆಸ್ಟ್ನಲ್ಲಿ ನಡೆದ ಫಿಡೆ 45ನೇ ಚೆಸ್ ಒಲಿಂಪಿಯಾಡ್ (ವೈಯಕ್ತಿಕ) ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಶೂಟಿಂಗ್ನಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಮನು ಭಾಕರ್(Manu Bhaker) ಅವರಿಗೆ 2024ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Dhyan Chand Khel Ratna) ಪ್ರಶಸ್ತಿ ನೀಡಲಾಗಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀ ಏರ್ ಪಿಸ್ತೂಲ್, ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ತಲಾ ಕಂಚಿನ ಪದಕ ಗೆದ್ದಿದ್ದರು.

ಪ್ಯಾರಾ-ಅಥ್ಲೆಟಿಕ್ಸ್ನಲ್ಲಿ ಅವರ ಅತ್ಯುತ್ತಮ ಸಾಧನೆ ಮಾಡಿದ ಪ್ರವೀಣ್ ಕುಮಾರ್ 2024ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದರು. ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ (ಪುರುಷರ ಹೈಜಂಪ್ T64) ಚಿನ್ನದ ಪದ, 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ (ಪುರುಷರ ಹೈಜಂಪ್ T64) ಬೆಳ್ಳಿ ಪದಕ, 2023ರಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ 4ನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ (ಪುರುಷರ ಹೈಜಂಪ್ T64) ಚಿನ್ನ ಗೆದ್ದಿದ್ದರು.
ಹಾಕಿಯಲ್ಲಿ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ನಾಯಕ ಹರ್ಮನ್ಪ್ರೀತ್ ಸಿಂಗ್ಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ (ಪುರುಷರ ಹಾಕಿ ತಂಡ) ಕಂಚಿನ ಪದಕ ಗೆದ್ದಿರುವ ಭಾರತದ ಹಾಕಿ ತಂಡದ ನಾಯಕ, 2021ರಲ್ಲಿ ಜಪಾನ್ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ (ಪುರುಷರ ಹಾಕಿ ತಂಡ) ಕಂಚಿನ ಪದಕ ಜಯಿಸಿದ್ದರು. ಹ್ಯಾಂಗ್ಝೌನಲ್ಲಿ ನಡೆದ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ (ಪುರುಷರ ಹಾಕಿ ತಂಡ) ಚಿನ್ನದ ಪದಕ ಗೆದ್ದಿತ್ತು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಅಮನ್ (ಕುಸ್ತಿ), ಸರಬ್ಜೋತ್ ಸಿಂಗ್ (ಶೂಟಿಂಗ್) ಸೇರಿ ಒಟ್ಟು 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಥ್ಲೆಟಿಕ್ಸ್ನಲ್ಲಿ ಸಾಧನೆ ಮಾಡಿರುವ ಸುಚಾ ಸಿಂಗ್ ಅವರಿಗೆ 2024ರ ಅರ್ಜುನ ಪ್ರಶಸ್ತಿ (ಜೀವಮಾನ) ಪ್ರದಾನ ಮಾಡಲಾಯಿತು.
ದ್ರೋಣಾಚಾರ್ಯ ಪ್ರಶಸ್ತಿಗಳು ಸಂದೀಪ್ ಸಾಂಗ್ವಾನ್ (ಹಾಕಿ), ದೀಪಾಲಿ ದೇಶಪಾಂಡೆ (ಶೂಟಿಂಗ್), ಸುಭಾಶ್ ರಾಣಾ (ಶೂಟಿಂಗ್) ಅವರಿಗೆ ದೊರೆತವು.
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ) ವಿಭಾಗದಲ್ಲಿ ಅರ್ಮಾಂಡೋ ಆಗ್ನೆಲೊ ಕೊಲಾಕೊ (ಫುಟ್ಬಾಲ್) ಮತ್ತು ಎಸ್ ಮುರಳೀಧರನ್ (ಬ್ಯಾಡ್ಮಿಂಟನ್) ಪಡೆದರು.