ನವದೆಹಲಿ: ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 90 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಕೇರಳದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ 73 ವರ್ಷದ ನ್ಯಾ. ಶಶಿಧರನ್ ನಂಬಿಯಾರ್ ಮೋಸ ಹೋದವರು. ಶಶಿಧರನ್, ತ್ರಿಪುಣಿತುರಾದ ಎರೂರ್ ಅಮೃತ ಲೇನ್ ನಲ್ಲಿ ವಾಸಿಸುತ್ತಿದ್ದಾರೆ. ನೀವು ಹಾಕಿದ ಹಣಕ್ಕೆ ಆನ್ ಲೈನ್ ಷೇರು ಮಾರುಕಟ್ಟೆ ಮೂಲಕ ಶೇ. 850ರಷ್ಟು ಲಾಭಾಂಶ ನೀಡುತ್ತೇವೆ ಎಂದು ಹೇಳಿ ನಂಬಿಸಿ, ವಂಚಿಸಿದ್ದಾರೆ ಎನ್ನಲಾಗಿದೆ.
ನಂಬಿಯಾರ್ ಅವರನ್ನು ಷೇರು ಮಾರುಕಟ್ಟೆ ವಹಿವಾಟಿಗೆ ಸಂಬಂಧಿಸಿದ ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಹೆಸರಿನ ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆ. ಹೂಡಿಕೆಯು ಶೇ.850 ಆದಾಯವನ್ನು ನೀಡುತ್ತದೆ ಎಂದು ಗುಂಪಿನ ಸದಸ್ಯರು ಭರವಸೆ ನೀಡಿದ್ದಾರೆ. ಆನಂತರ ಗುಂಪಿನಲ್ಲಿ ಹಂಚಿಕೊಂಡ ಲಿಂಕ್ ಮೂಲಕ ಹಣ ವರ್ಗಾಯಿಸಿದ್ದಾರೆ.
ಡಿ. 4 ರಿಂದ ಡಿ. 30ರ ನಡುವೆ ವಂಚಕರು, ನಿವೃತ್ತ ನ್ಯಾಯಮೂರ್ತಿಗಳ ವಿವಿಧ ಬ್ಯಾಂಕ್ ಖಾತೆಗಳಿಂದ 90 ಲಕ್ಷ ರೂ.ವನ್ನು ದೋಚಿ ವಂಚಿಸಿದ್ದಾರೆ. ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ ನಿವೃತ್ತ ನ್ಯಾಯಮೂರ್ತಿ ದೂರು ಸಲ್ಲಿಸಿದ್ದಾರೆ.


















