ಬೆಂಗಳೂರು: ಜೆಡಿಎಸ್ ನ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿದ ನಂತರ ದಳ ಆಕ್ರೋಶಗೊಂಡಂತಿದೆ.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಯ ವಿರುದ್ಧ ಗುಡುಗಿದ್ದಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, ಸಿಎಂ ವಿರುದ್ಧ ಕಟು ಶಬ್ದ ಬಳಕೆ ಮಾಡಿದ್ದಾರೆ.
ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರ ತಪ್ಪಿಸಿ, ಸಮಾವೇಶಗಳ ಮೂಲಕ ಏಕವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಲಜ್ಜೆಗೆಟ್ಟ ಸಿದ್ದಹಸ್ತ. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದ ಕುತಂತ್ರಿ. ಇನ್ನಿಲ್ಲದ ಷಡ್ಯಂತ್ರ, ಗುಂಪುಗಾರಿಕೆ ನಡೆಸಿ ರಾಜಕಾರಣದಿಂದ ಖರ್ಗೆಯವರನ್ನು ಬಲವಂತವಾಗಿ ದಿಲ್ಲಿ ರಾಜಕೀಯಕ್ಕೆ ತಳ್ಳಿದ ಪರಮ ಸ್ವಾರ್ಥಿ. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಅಂದಿನ ಕೆಪಿಸಿಸಿ ಅಧ್ಯಕ್ಷ. ಡಾ. ಜಿ.ಪರಮೇಶ್ವರ್ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಕುತಂತ್ರದಿಂದ ಸೋಲಿಸಿದ ಷಡ್ಯಂತ್ರಿ.
ಸಿಎಂ ರೇಸ್ ನಲ್ಲಿದ್ದ ಡಾ.ಪರಮೇಶ್ವರ್ ಅವರನ್ನು ಸ್ವಾರ್ಥಕ್ಕಾಗಿ ಸೋಲಿಸಿ ಮುಖ್ಯಮಂತ್ರಿ ಗಾದಿಗೇರಿದ ಕಪಟಿ ಅಹಿಂದ ಹೆಸರಲ್ಲಿ ಪ್ರತಿಸ್ಪರ್ಧಿಗಳನ್ನು ಬಲಿ ಹಾಕಿದ ಸಿದ್ಧಸೂತ್ರದಾರ. ಮೂಲ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮೇಲಾಗಿ ಸಾಯುವ ತನಕ ಜತೆಯಲ್ಲಿರುವೆ ಎನ್ನುವ ಕನಕಪುರ ಬಂಡೆಗೂ ಹೆಜ್ಜೆಹೆಜ್ಜೆಗೂ ಅಧಿಕಾರ ತಪ್ಪಿಸುತ್ತಿರುವ ಸರ್ವಾಧಿಕಾರಿ!.ಒಂದೇ ಎರಡೇ.. ಹೆಸರಿಗೆ ಮಾತ್ರ ಅಹಿಂದ, ಅಧಿಕಾರ ಸೂತ್ರವೆಲ್ಲ ನನ್ನದೇ ಎನ್ನುವ ಢೋಂಗಿ ಸಮಾಜವಾದಿ ವೈಟ್ನರ್ ತೇಪೆಗಳಿಗೂ ಈಗ ರಂಧ್ರಗಳು ಬೀಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.