ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಎಸ್ ಐಟಿ ಅಧಿಕಾರಿಗಳು ಜನ ಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಟೆಕ್ನಿಕಲ್ ಸೇರಿದಂತೆ ಹಲವು ರೀತಿಯ ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ಸದ್ಯ ಷರತ್ತು ಬದ್ಧ ಜಾಮೀನಿನ ಮೇಲೆ ಮುನಿರತ್ನ ಹೊರ ಬಂದಿದ್ದಾರೆ. 53 ಸಾಕ್ಷಿಗಳು ಹಾಗೂ ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ದಾಖಲಾಗಿದೆ.
ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದು ತನಿಖೆಯಲ್ಲಿ ದೃಢಪಟ್ಟ ಕುರಿತು ಚಾರ್ಜ್ ಶೀಟ್ ನಲ್ಲಿ ಎಸ್ ಐಟಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆ ಸಿಐಡಿ ಎಸ್ ಐಟಿಗೆ ವರ್ಗಾವಣೆ ಮಾಡಲಾಗಿತ್ತು. ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ಕೂಡ ಆಡಿಯೋ ಮುನಿರತ್ನ ಅವರದ್ದೇ ಎಂದು ದೃಢಪಟ್ಟಿತ್ತು. ಮುನಿರತ್ನ ಗುತ್ತಿಗೆದಾರ ಚೆಲುವರಾಜುಗೆ ಕರೆ ಮಾಡಿ ಮಾತನಾಡಿದ್ದು ಎನ್ನಲಾದ ಆಡಿಯೋದ್ದಲ್ಲಿದ್ದ ಧ್ವನಿ ಅವರದ್ದೇ ಎಂಬುವುದು ದೃಢ ಪಟ್ಟಿದೆ.
ಗುತ್ತಿಗೆದಾರ ಚೆಲುವರಾಜು ಹತ್ತಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಾಸಕ ಮುನಿರತ್ನ ನಂತರ ಆತನಿಗೆ ನಿಂದನೆ ಮಾತುಗಳನ್ನಾಡಿದ್ದರು. ಜೊತೆಗೆ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಬಗ್ಗೆ ಜಾತಿ ನಿಂದನೆ ಮಾಡಿದ್ದರು. ಇದನ್ನು ರೆಕಾರ್ಡ್ ಮಾಡಿದ್ದ ಚೆಲುವರಾಜು, ವೇಲು ನಾಯ್ಕರ್ ಮುನಿರತ್ನ ದೂರು ದಾಖಲಿಸಿದ್ದರು.